ವಿಜಯ ದರ್ಪಣ ನ್ಯೂಸ್…
ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಏಕ ವಚನ ಬಳಸಿಲ್ಲ: ಸಬ್ಬಕೆರೆ ಶಿವಲಿಂಗಯ್ಯ

ರಾಮನಗರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬರೆದುಕೊಟ್ಟಂತೆ ಗಾಣಕಲ್ ನಟರಾಜ್ ಯುವ ನಾಯಕ ನಿಖಿಲ್ ವಿರುದ್ಧ ಮಾತನಾಡಿದ್ದಾರೆ. ಆ ಮನುಷ್ಯನಿಗೆ ವೈಯಕ್ತಿಕವಾಗಿ ಗೌರವ ಇಲ್ಲ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನದಲ್ಲಿದ್ದಾನೆ ಎಂಬ ಕಾರಣಕ್ಕೆ ಗೌರವ ಕೊಡಬೇಕಿದೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್ ಸಾಹೇಬ ಎಂದು ಸಂಭೋದಿಸಿ ತೀಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆಯೇ ಹೊರತು ಏಕೆ ವಚನ ಬಳಸಿಲ್ಲ. ಡಿ.ಕೆ.ಶಿವಕುಮಾರ್, ಗಾಣಕಲ್ ನಟರಾಜ್ ಹಾಗೂ ನಿಖಿಲ್ ಕುಮಾರಸ್ವಾಮಿರವರು ಬೈರಮಂಗಲಕ್ಕೆ ಹೋದರೆ ರೈತರು ಯಾರನ್ನು ಫೇರಾವ್ ಮಾಡುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದರು.
ಡಿಕೆಶಿ ಬೇರೆಯವರನ್ನು ಎತ್ತಿಕಟ್ಟಿ ಮಾತನಾಡಿಸುವುದು ಅವರಿಗೆ ಶೋಭೆತರುವುದಿಲ್ಲ, ಡಿಕೆ ಸಹೋದರರಿಗೆ ಕೇವಲ ಒಂದು ಸೋಲನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಮಂಡ್ಯದಲ್ಲಿ ಎಲ್ಲರು ಸೇರಿ ಚಿಕ್ಕ ಹುಡುಗನ ಬೆನ್ನಿಗೆ ಚೂರಿ ಹಾಕಿದರು. ಚಿನ್ನಪಟ್ಟಣದಲ್ಲಿ ಘಟಾನುಘಟಿಗಳು ಒಂದಾಗಿ ಸೋಲಿಸಿದರು. ನಿಮಗೆಲ್ಲ ನಿಖಿಲ್ ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಶಿವಲಿಂಗಯ್ಯ ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಮಾತನಾಡಿ, ಕುಮಾರಸ್ವಾಮಿ ಅವರನ್ನು ಡಿ.ಕೆ.ಶಿವಕುಮಾರ್ ರವರು ಅನೇಕ ಬಾರಿ ಲಘುವಾಗಿ ಮಾತನಾಡಿದ್ದಾರೆ. ಅವರಿಗೆ ಉತ್ತರ ಕೊಡಲು ಕಾರ್ಯಕರ್ತರಿಗೂ ಬರುತ್ತದೆ. ಆದರೆ, ಜೆಡಿಎಸ್ ಪಕ್ಷ ನಮಗೆಲ್ಲ ಸಭ್ಯತೆ ಕಲಿಸಿದೆ. ಕುಮಾರಸ್ವಾಮಿರವರು ಬದ್ಧ ವೈರಿಗಳನ್ನು ಬ್ರದರ್ ಅಂತಾನೆ ಕರೆಯುತ್ತಾರೆ. ಹಾಗಾಗಿ ನಾವೆಲ್ಲರು ಸುಮ್ಮನಿದ್ದೇವೆ ಎಂದರು.
ಅಧಿಕಾರ ಕೊಡಲಿಲ್ಲ ಅಂತ ಸಿದ್ಧರಾಮಯ್ಯರವರ ಮೇಲೆ ತೋರಿಸಬೇಕಾದ ಕೋಪವನ್ನು ಬೇರೆಯವರ ಮೇಲೆ ತೋರಿಸುತ್ತಿದ್ದಾರೆ. ದೇವೇಗೌಡರು ಜೆಡಿಎಸ್ ಪಕ್ಷವನ್ನು ಕಟ್ಟಿ ಮುಖ್ಯಮಂತ್ರಿಯಾಗಿ ಪ್ರಧಾನಿಯೂ ಆಗಿದ್ದಾರೆ. ಡಿ.ಕೆ.ಶಿವಕುಮಾರ್ ರವರ ಆರ್ಹತೆ ಏನು, ಮುಖ್ಯಮಂತ್ರಿ ಹುದ್ದೆ ಕೊಟ್ಟಿಲ್ಲವಲ್ಲ ಒಂದು ಪ್ರಾದೇಶಿಕ ಪಕ್ಷ ಕಟ್ಟಲಿ ನೋಡೋಣ ಎಂದು ಸವಾಲು ಹಾಕಿದರು.
ಎರಡು ಬಾರಿ ಮೋಸ ಮಾಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರು. ನಿಖಿಲ್ ಕುಮಾರಸ್ವಾಮಿ ಅವರನ್ನು ಹೇಗೆ ಸೋಲಿಸಿದಿರಿ ಎಂಬುದು ಗೊತ್ತಿದೆ. ಡಿ.ಕೆ.ಶಿವಕುಮಾರ್ ರಾಮನಗರಕ್ಕೆ ಏನು ಕೊಡುಗೆ ನೀಡಿದ್ದೀರಿ ಎಂಬುದನ್ನು ದಾಖಲೆ ಬಿಡುಗಡೆ ಮಾಡಲಿ ಎಂದು ದೊರೆಸ್ವಾಮಿ ಹೇಳಿದರು.
ಜೆಡಿಎಸ್ ವಕ್ತಾರ ನರಸಿಂಹಮೂರ್ತಿ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಹೆಚ್ ಡಿ ದೇವೆಗೌಡರು, ಹೆಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಬಗ್ಗೆ ಮಾತನಾಡಿದರೆ, ನಿನ್ನ ವಿರುದ್ಧ ಮಾತನಾಡಲು ಪ್ರತಿ ಹಳ್ಳಿಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಇದ್ದಾರೆ. ಚಿಕ್ಕ ಹುಡುಗನನ್ನು ಸೋಲಿಸಲು ಇಡೀ ಸಚಿವ ಸಂಪುಟ ಚನ್ನಪಟ್ಟಣ ಕ್ಷೇತ್ರದಲ್ಲಿ ಠಿಕಾಣಿ ಹೂಡಿತು. ಆಗ ನಾಚಿಕೆ ಆಗಲಿಲ್ಲವೇ ಎಂದು ಪ್ರಶ್ನಿಸಿದರು.
ತುಮಕೂರು ಸಾಧನಾ ಸಮಾದೇಶದಲ್ಲಿ ಸಿದ್ದರಾಮಯ್ಯರವರ ಮೇಲಿನ ಕೋಪವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಮೇಲೆ ತೋರಿಸಿದ್ದೀರಿ. ಏನೊ ಹರಿತೀನಿ ಅಂತ ಅವಹೇಳನ ಪದ ಬಳಸಿದ್ದೀರಿ. ನೀವು ಡಿಸಿಎಂ ಅಂದುಕೊಂಡಿದ್ದೀರಾ ಅಥವಾ ಕೊತ್ವಾಲನ ಶಿಷ್ಯ ಎನ್ನುವ ಭ್ರಮೆಯಲ್ಲಿ ಇದ್ದೀರಾ ನೀವು ಮುಖ್ಯಮಂತ್ರಿ ಅಭ್ಯರ್ಥಿನ ಎಂಬ ಅನುಮಾನ ಕಾಡುತ್ತಿದೆ ಎಂದರು.
ಸಿಎಂ ಅಭ್ಯರ್ಥಿಗೆ ಸಂಸ್ಕಾರ, ಸೌಜನ್ಯ ಇರಬೇಕು. ಭಾಷೆಯಲ್ಲಿ ಹಿಡಿತ ಇರಬೇಕು. ಆದರೆ, ಕೊತ್ವಾಲನ ಬಳಿ ಬೆಳೆದಿರುವ ನಿಮಗೆ ಅದ್ಯಾವುದು ಇಲ್ಲ. ನೀವು ಮುಖ್ಯಮಂತ್ರಿಯಾದರೆ ಗೂಂಡಾ ರಾಜ್ಯ ಮಾಡುತ್ತೀರಿ ಎಂದು ನರಸಿಂಹಮೂರ್ತಿ ಹರಿಹಾಯ್ದರು.
ಮುಖಂಡ ಬಿ.ಉಮೇಶ್ ಮಾತನಾಡಿ, ರಾಜಕೀಯದಲ್ಲಿ ಬೇರೆಯವರ ಬಗ್ಗೆ ಮಾತನಾಡಿದರೆ ಗ್ರೇಟ್ ಆಗುತ್ತೇವೆಂದು ಭಾವಿಸಿದ್ದಾರೆ. ಅದರಲ್ಲಿ ನಟರಾಜ್ ಒಬ್ಬರು. ಯುವಕರಿಗೂ ಪ್ರಶ್ನಿಸುವ ಹಕ್ಕಿದೆ. ಯುವ ಘಟಕ ಅಧ್ಯಕ್ಷರಾಗಿ ಜವಾಬ್ದಾರಿ ಸ್ಥಾನದಲ್ಲಿರುವ ನಿಖಿಲ್ ಕುಮಾರಸ್ವಾಮಿ ರೈತರ ಪರವಾಗಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರ ನೀಡುವುದನ್ನು ಬಿಟ್ಟು ಪಲಾಯನ ಮಾಡುವುದರಲ್ಲಿ ಅರ್ಥ ಇಲ್ಲ ಎಂದರು.
ಜೆಡಿಎಸ್ ಮುಖಂಡರಾದ ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಗೌಡಯ್ಯನದೊಡ್ಡಿ ಕೃಷ್ಣಗೌಡ, ಅಂಜನಾಪುರ ವಾಸು, ಮಾವಿನಸಸಿ ವೆಂಕಟೇಶ್, ಬಾಲಗೇರಿ ರವಿ, ವಕೀಲ ರಾಜಶೇಖರ್, ಗೂಳಿ ಕುಮಾರ್ ಗೌಡ, ಲಕ್ಕಿ ಕಾಂತ್, ಎನ್. ರಮೇಶ್, ಕೊಶ್ರೀಪುರ ಗೋವಿಂದರಾಜ್, ಬೀರೇಶ್ ಬೋರೆಗೌಡ, ಕಾಡನಕುಪ್ಪೆ ನವೀನ್, ಆಡಿಟರ್ ಕುಮಾರ್,ಪವನ್ ದೊಡ್ಡ ಉಮೇಶ್, ಜಯಕುಮಾರ್, ಕೆಂಪರಾಜು, ಶ್ರೀನಿವಾಸ್ ಮತ್ತಿತರರು ಇದ್ದರು.








