ವಿಜಯ ದರ್ಪಣ ನ್ಯೂಸ್…..
ಸೋಬಾನೆ ಪದಗಳು ಎಲ್ಲ ವಯೋಮಾನದ ಜನಮಾನಸದಲ್ಲಿ ನೆಲೆಗೊಳ್ಳುವಂತೆ ಮಾಡಬೇಕು : ಡಾ.ಎಂ. ಬೈರೇಗೌಡ

ರಾಮನಗರ: ಆಧುನಿಕ ತಂತ್ರಜ್ಞಾನದ ಹುಚ್ಚುಹೊಳೆಯಲ್ಲಿ ಕೊಚ್ಚಿಹೋಗುತ್ತಿದೆ ಎನ್ನಲಾದ ಜನಪದ ಸಂಗೀತ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಹೊಸ ನೆಲೆಯಲ್ಲಿ ವಿಶಾಲಬಾಹುಗಳನ್ನು ಚಾಚೆ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಗಾಯಿತ್ರಿಗಳೆನಿಸಿರುವ ಸೋಬಾನೆ ಪದಗಳು ಎಲ್ಲ ವಯೋಮಾನದ ಜನಮಾನಸದಲ್ಲಿ ನೆಲೆಗೊಳ್ಳುವಂತೆ ಮಾಡಬೇಕಾದ ತುರ್ತು ಅಗತ್ಯವಿದೆ ಎಂದು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ನ ಅಂಗಸಂಸ್ಥೆ ಇಫ್ರೋ ಜಾನಪದ ಮಹಾವಿದ್ಯಾಲಯದ ನಿರ್ದೇಶಕ ಡಾ. ಎಂ. ಬೈರೇಗೌಡ ನುಡಿದರು.
ಅವರು ಇಸ್ರೋ ಜಾನಪದ ಮಹಾವಿದ್ಯಾಲಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಸೋಬಾನೆ ಗೀತಗಾಯನ ತರಬೇತಿ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಿ ಸುಮಾರ ಎಪ್ಪತ್ತಕ್ಕೂ ಹೆಚ್ಚು ಪ್ರಕಾರದ ಸೋಬಾನೇ ಗೀತೆಗಳು ಕನ್ನಡದಲ್ಲಿವೆ. ಹುಟ್ಟಿನಿಂದ ಸಾವಿನವರೆಗೆ ಬರುವ ಜೀವನಾವರ್ತದ ಆಚರಣೆಗಳ ಸಂದರ್ಭದಲ್ಲಿ ದಣಿವರಿಯದೆ ಹಾಡುತ್ತಿದ್ದ ಗಾಯಕ ಗಾಯಕಿಯರಿದ್ದರು. ಅವರ ಸಂಖ್ಯೆ ನೋಡನೋಡುತ್ತಿದ್ದಂತೆಯೇ ಕ್ಷೀಣಿಸುತ್ತಿದೆ. ಈ ಸಾಲಿನಲ್ಲಿ ಇನ್ನೂ ನಮ್ಮ ನಡುವೆ ನಡೆದಾಡುತ್ತಿರುವ ಸೋಬಾನೇ ಕೃಷ್ಣಗೌಡರ ಸೋಬಾನೆ ಸೊಲ್ಲುಗಳು ಹೊಸ ಉತ್ಸಾಹವನ್ನು ಮೂಡಿಸುತ್ತವೆ. ಈಗಲಾದರೂ ಉಳಿದಿರುವ ಬೆರಳೆಣಿಕೆಯಷ್ಟು ಕಲಾವಿದರು ಮತ್ತು ಅವರ ಕಲೆಯನ್ನು ಪೋಷಿಸುವ ಕೆಲಸ ಮಾಡದಿದ್ದರೆ ಎಲ್ಲವೂ ಮರೆಗೆ ಸರಿಯುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಮಾತನಾಡಿ ಪ್ರಾದೇಶಿಕ ಭಾಷೆಯ ಸೊಗಡನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಿರುವ ನಮ್ಮ ಸೋಬಾನೆ ಕಲಾವಿದರಿಗೆ ಸಿಗಬೇಕಾದ ಗೌರವ ಮನ್ನಣೆ ಸಿಗುತ್ತಿಲ್ಲ. ಮೊದಲಿನ ವೈಭವ ಮರುಕಳಿಸಿದರೆ ಅವರು ತಮ್ಮ ಕಲೆಗೂ ಬೆಲೆಯಿದೆ ಎಂದು ಅದನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆಂದರು. ಪ್ರಾಥಮಿಕ ಶಾಲಾ ಹಂತದಿಂದಲೇ ಈ ಸೋಬಾನೆ ಗೀತೆಗಳ ಸೊಲ್ಲನ್ನು ಪಠ್ಯಪುಸ್ತಕಗಳಲ್ಲಿ ಆಳವಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಸೋಬಾನೆ ಗೀತೆಗಳ ತರಬೇತುದಾರ ಸೋಬಾನೆ ಕೃಷ್ಣಗೌಡ ಮಾತನಾಡಿ ಈ ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ಶಿಬಿರಾರ್ಥಿಗಳು ಇಷ್ಟು ಬೇಗ ಈ ಸೋಬಾನೆ ಸೊಲ್ಲುಗಳನ್ನು ಕಲಿಯುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಅತ್ಯಂತ ಶ್ರದ್ಧೆಯಿಂದ ಕಲಿತು ದಿನಕ್ಕೆರಡರಂತೆ ಎಂಟು ಪ್ರಕಾರದ ಸೋಬಾನೆ ಸೊಲ್ಲುಗಳನ್ನು ಕಲಿತದ್ದು ನನಗಂತೂ ತುಂಬಾ ಖುಷಿಯಾಗಿದೆ. ಈ ಪರಂಪರೆಯನ್ನು ಉಳಿಸಬಲ್ಲರೆಂಬ ಆತ್ಮಸ್ಥೆರ್ಯ ಮೂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶಿಬಿರಾರ್ಥಿ ಶೈಲಜ ಮಾತನಾಡಿ. ಈ ನಾಲ್ಕು ದಿನಗಳ ಶಿಬಿರ ಎಂದಾಗ ಪಾಲ್ಗೊಳ್ಳಲು ನಾನು ಹಿಂಜರಿದೆ. ಅದರ ಸ್ವಾದವನ್ನು ಕೇಳುತ್ತಿದ್ದಂತೆಯೇ ಹೇಗಾದರೂ ಸಮಯ ಮಾಡಿಕೊಂಡು ಈ ಶಿಬಿರದ ಕೊನೆಯ ದಿನದವರೆಗೂ ಉಳಿದುಕೊಳ್ಳಲೇ ಬೇಕೆಂದು ಹಟಮಾಡಿ ಉಳಿದೆ. ಅತ್ಯಂತ ಸುಂದರ ಮತ್ತು ಸುಶ್ರಾವ್ಯವಾದ ಸೋಬಾನೆ ಗೀತೆಗಳ ಮಾಧುರ್ಯಕ್ಕೆ ಮೈ ಮರೆದು ನಾಲ್ಕು ದಿನಗಳಲ್ಲಿ ನಲವತ್ತು ದಿನಗಳಾದರೂ ಕಲಿಯುವ ಆಸಕ್ತಿ ನನ್ನಲ್ಲಿ ಉಳಿದಿದೆ ಎಂದು ತಮ್ಮ ಮನದಳಲನ್ನು ತೋಡಿಕೊಂಡರು.
ಶಿಬಿರಾರ್ಥಿಗಳ ಪೋಷಕರಾದ ವೈಷ್ಣವಿ ಅವರು ತಮ್ಮ ಮಗಳು ಧೃತಿ ನಾಲ್ಕೂ ದಿನಗಳ ಕಾಲ ಸೋಬಾನೇ ಗೀತೆಗಳ ಗುಂಗಿನಲ್ಲಿಯೇ ಇಲ್ಲಿ ನಡೆದದ್ದನ್ನು ನಮಗೂ ತಿಳಿಸಿ ನಮ್ಮಲ್ಲಿಯೂ ಕುತೂಹಲ ಮೂಡುವಂತೆ ಮಾಡಿದಳು. ಆ ಕಾರಣಕ್ಕಾಗಿಯೇ ಕುಟುಂಬ ಸಹಿತ ನಾವಿಲ್ಲಿ ಬಂದಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತೊಬ್ಬ ಪೋಸಕ ಮೋಹನ್ ಮಾತನಾಡಿ ಇದೊಂದು ಬಹುದೊಡ್ಡ ಅವಕಾಶ. ಈ ಯಾನ ನಿರಂತರವಾಗಿ ನಾಡಿನಾದ್ಯಂತ ನಡೆಯಬೇಕಾಗಿದೆ. ಉತ್ತರ ಕರ್ನಾಟಕ, ಕರಾವಳಿ ಪ್ರದೇಶದಲ್ಲಿಯೂ ಸೋಬಾನೆ ಗೀತೆಗಳ ಅಥವಾ ಸಂಪ್ರದಾಯದ ಹಾಡುಗಳ ಕಲಿಕೆ ಆರಂಭವಾಗಿಬೇಕೆಂದು ಆಶಿಸಿದರು.
ಸಂಗೀತ ಶಿಕ್ಷಕಿ ಹಾಗೂ ಇನ್ನೊ ಜಾನಪದ ಮಹಾವಿದ್ಯಾಲಯದ ಸಂಯೋಜಕಿ ವಿನುತಾ ಬೂದಿಹಾಲ್ ಪ್ರಾಸ್ತಾವಿಕವಾಗಿ ಮತನಾಡಿದರು. ಕುರಿಬಾಂಡ್ ಕ್ಯಾತಿಯ ನಟ, ನಿರ್ದೇಶಕ ಇಸ್ಮಾಯಿಲ್ ಸಾಗರ್, ರಂಗಸಂಗೀತ ನಿರ್ದೇಶಕ ಗಜಾನನ ಟಿ. ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಲತಾ ರಮೇಶ್, ಗಾಯತ್ರಿ ರಾಮಚಂದ್ರ, ಧೃತಿ, ಅನಿಕಾ ಕಿರಣ ಕಂಭಂ, ತೈಲಶಿ ಮೋಹನ್, ವೈಷ್ಣವಿ, ಶಶಿಕಲ, ಶನಿಷ್ಯ, ಭವ್ಯ ತಂಡ ತಂಡಗಳಾಗಿ ತಾವು ನಾಲ್ಕು ದಿನಗಳ ಕಾಲ ಕಲಿತ ಸೋಬಾನೆ ಪದಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.











