ವಿಜಯ ದರ್ಪಣ ನ್ಯೂಸ್….
ಅಕ್ಷರದ ಹಂಗು ತೊರೆದ ನಿರಕ್ಷರಿಗಳು ತಮ್ಮ ಕಲಾನೈಪುಣ್ಯತೆ ಭಾಷೆಯ ಬಳಕೆಯಿಂದ ಭಾಷಾ ಬೆಳವಣಿಗೆ ಸಾಧ್ಯವಾಗಿದೆ : ಪ್ರೊ. ವ ನಂ ಶಿವರಾಮು

ಕನ್ನಡ ಭಾಷೆಗೆ ಅಕ್ಷರಸ್ಥರಿಂದ ಯಾವುದೇ ಕೊಡುಗೆ ಇಲ್ಲ. ಆದರೆ ಅಕ್ಷರದ ಹಂಗು ತೊರೆದ ನಿರಕ್ಷರಿಗಳು ತಮ್ಮ ಕಲಾನೈಪುಣ್ಯತೆ ಭಾಷೆಯ ಬಳಕೆಯಿಂದ ಭಾಷಾ ಬೆಳವಣಿಗೆ ಸಾಧ್ಯವಾಗಿದೆ ಎಂದು ಇಫ್ರೋ ಜಾನಪದ ಮಹಾವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ. ವ ನಂ ಶಿವರಾಮು ಹೇಳಿದರು.
ಅವರು ಕೃಷ್ಣಾಪುರದೊಡ್ಡಿಯ ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿರುವ ಸೋಬಾನೇ ಗೀತಗಾಯನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗಾಯನ ಅಥವಾ ಜನಪದ ಕಲಾ ಪ್ರಕಾರಗಳ ಕಲಿಕೆ ಕಲಾವಿದರನ್ನು ದೇಶ ವಿದೇಶಗಳಿಗೆ ಕೊಂಡೊಯ್ಯುವ ವಾಹಕವಾಗಿದೆ. ಜೀವಮಾನವೆಲ್ಲ ಅಧ್ಯಯನದಲ್ಲಿ ತೊಡಗಿದ ವಿದ್ವಾಂಸರು ಜನಪದ ಸಾಹಿತ್ಯದ ಸ್ವರೂಪಗಳನ್ನು ತಿಳಿಸಬಹುದು. ಆದರೆ ಜನಪದ ಕಲಾವಿದರು ಶ್ರಮ ಮತ್ತು ಕಂಠ ಮಾದುರ್ಯದಿಂದ ಸಮೂಹವನ್ನು ಆಕರ್ಷಿಸುವ ಶಕ್ತಿ ಪಡೆದಿರುತ್ತಾರೆ ಎಂದು ಕನ್ನಡ ಭಾಷೆಯ ಉಳಿವಿನ ಬಗ್ಗೆ ವಿವರಿಸಿದರು.
ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಡಾ ಎಂ ಬೈರೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಅಕ್ಷರ ಕಲಿತವರು ಕದ್ದಮಾಲನ್ನು ತಮ್ಮ ಸೀಮಿತ ಪ್ರತಿಭೆಯ ಜೊತೆಗೆ ವಾದ್ಯ ಪರಿಕರಗಳನ್ನು ಬಳಸಿಕೊಂಡು ತಮ್ಮ ಕಂಠದಿಂದಲೇ ಜನಪ್ರಿಯಗೊಂಡ ಮೂಲ ಕಲಾವಿದರನ್ನು ಮರೆತು ತಾವು ವಿಜೃಂಭಿಸುತ್ತಿದ್ದಾರೆ ಈ ಪ್ರಕ್ರಿಯೆ ನಿಲ್ಲಬೇಕು ಮೂಲ ಕಲಾವಿದರು ಮುಖ್ಯ ವಾಹಿನಿಗೆ ಬರುವಂತದಾಗ ಜನಪದ ಎಲ್ಲ ಪ್ರಕಾರಗಳು ಮತ್ತು ಕನ್ನಡ ಭಾಷೆ ಉದ್ಧಾರವಾಗುತ್ತದೆ ಎಂದರು.
ಕಾರ್ಯಕ್ರಮದ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಂಸ್ಕೃತಿ ಚಿಂತಕ ಸಚಿ ಗಂಗಾಧರಯ್ಯ ಮಾತನಾಡಿ ಪೂರ್ವಜರ ಸೇವೆಯ ಬದುಕೇ ಜಾನಪದವಾಗಿತ್ತು. ಕೂಡು ಕುಟುಂಬದ ಪರಿಕಲ್ಪನೆ ಇಂದು ವಿನಾಶದ ಎಡೆಗೆ ಭಾವಿಸಿದೆ 3-4 ತಲೆಮಾರುಗಳು ಒಂದೇ ಸೂರಿನಡಿ ಬದುಕುತ್ತಿದ್ದ ದಿನಗಳು ಕಳೆದುಹೋಗಿ ಅವಿಭಕ್ತ ಕುಟುಂಬ ವ್ಯವಸ್ಥೆ ಬಂದಿದೆ. ನಮ್ಮ ಪರಂಪರೆಯ ಆ ಎಲ್ಲಾ ಜಾನಪದ ಸೊಗಡು ಬೇರುಸಹಿತ ನಾಶವಾಗಿದೆ ಎಂದು ವಿಷಾದಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಡಾ. ಕೆಂಪಮ್ಮ ಮಾತನಾಡಿ ಮನುಷ್ಯನ ಹುಟ್ಟಿನ ಜೊತೆಗೆ ಜನಪದದ ಜನನವಾಗುತ್ತದೆ ಅದರ ಸಾವು ಮಾನವನ ಸಾವಿನ ಆಚರಣೆಯಲ್ಲಿ ಅನುಭವಿಸಬೇಕಾದ ಮಾರ್ಗದರ್ಶನ ನೀಡುವ ಜನರು ಇಲ್ಲವಾಗುತ್ತಿದ್ದಾರೆ ಜನಪದ ಗೀತೆಗಳು ನಮಗೆ ಮಾರ್ಗದರ್ಶನ ನೀಡುತ್ತವೆ ಆದರೆ ಇಂದು ಅದೆಲ್ಲ ಕಲಿತವರ ಕೈಗೆ ಸಿಕ್ಕು ಮೂಲ ಸ್ವರೂಪವನ್ನು ಕಳೆದುಕೊಂಡು ಅಂದಿನ ವೈಭವವು ಇಲ್ಲವಾಗುತ್ತಿದೆ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿಟಿ ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿಎನ್ ಮಂಜೇಶ್ ಚನ್ನಾಪುರ ಸಾಂಸ್ಕೃತಿಕ ಸಂಘಟಕ ಕೀಲಾರ ಕೃಷ್ಣೇಗೌಡ ಸಂಗೀತ ಶಿಕ್ಷಕಿ ವಿನುತಾ ಬೂದಿಹಾಲ್ ಹಾಗೂ ಸೋಬಾನೆ ಗೀತೆ ತರಬೇತುದಾರ ಸೋಬಾನೆ ಕೃಷ್ಣೇಗೌಡ ಮತ್ತವರ ತಂಡದ ಹಿರಿಯ ಕಲಾವಿದರಾದ ದೇವಮ್ಮ ಜಯಮ್ಮ ಚಿಕ್ಕಮಾದಮ್ಮ ಉಪಸ್ಥಿತರಿದ್ದರು. ಬೆಂಗಳೂರು ನಗರ ಸೇರಿದಂತೆ 15 ಮಂದಿ ಶಿಬಿರಾರ್ಥಿಗಳು ನಾಲ್ಕು ದಿನಗಳ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.











