ವಿಜಯ ದರ್ಪಣ ನ್ಯೂಸ್….
ಧರ್ಮ ಸಂಸ್ಕೃತಿ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವನ್ನು ಸುಸ್ಥಿತಿಯಲ್ಲಿಡಲು ರಂಗಭೂಮಿ ಶಕ್ತಿ ಹೊಂದಿದೆ

ಧರ್ಮ ಸಂಸ್ಕೃತಿ ಸೌಹಾರ್ದತ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವನ್ನು ಸುಸ್ಥಿತಿಯಲ್ಲಿಡುವ ಮುಖ್ಯ ಕಾರ್ಯವನ್ನು ರಂಗಭೂಮಿ ನಿರ್ವಹಿಸುವ ಶಕ್ತಿ ಹೊಂದಿದೆ ಎಂದು ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ನುಡಿದರು.
ಅವರು ಇಂದು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಆಯೋಜಿಸಿದ್ದ ಶಿವಮೊಗ್ಗ ರಂಗಾಯಣ ನಿರ್ಮಿತ ಜನಪ್ರಿಯ ಕಥೆಗಾರ ಮತ್ತು ಕಾದಂಬರಿಕಾರ ಬೋಳುವಾರು ಮಹಮ್ಮದ್ ಕುಂಞ ಅವರ ದೀರ್ಘ ಕಾದಂಬರಿ ಆಧಾರಿತ ನಾಟಕ ಸ್ವಾತಂತ್ರ್ಯದ ಓಟ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶದ ರಂಗಚಟುವಟಿಕೆಗಳು ಮನಸು-ಮನಸುಗಳನ್ನು ಬೆಸೆವ, ಜಾತಿ ಧರ್ಮಗಳನ್ನು ಬೇಧವನ್ನು ಹೊಡೆದೋಡಿಸುವ ನೆಲೆಯಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆಗ ಮಾತ್ರ ಸಮಸಮಾಜ ನಿರ್ಮಾಣ ಕಾರ್ಯ ಸಾಧ್ಯ. ಇದು ನಾಡಿನಾದ್ಯಂತ ಪಸರಿಸಬೇಕಾದ ಅವಶ್ಯಕತೆ ಇದೆ.
ಕನ್ನಡದ ಕಥೆ-ಕಾದಂಬರಿಕಾರರು ಯಾರಿಗೂ ಕಡಿಮೆ ಇಲ್ಲದಂತೆ ಅದ್ಭುತವಾದ ವಿಚಾರಗಳನ್ನು ತಮ್ಮ ಬರಹಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅಂತವುಗಳನ್ನು ಹೀಗೆ ರಂಗಪಟ್ಟಿಗಳನ್ನಾಗಿ ನಿರ್ಮಿಸಿ ಹತ್ತಾರು ಕಡೆ ಪ್ರದರ್ಶನ ನೀಡಬೇಕಾದ ಅವಶ್ಯಕತೆ ಎಂದು ಕರೆನೀಡಿದರು.
ಯಾವುದೇ ಪ್ರಚಾರಕ್ಕೆ ತಲೆಕೆಡಿಸಿಕೊಳ್ಳದೆ, ಎಲೆಮರೆಯ ಕಾಯಿಯಂತೆ ಒಂದು ಸುಂದರ ಪರಿಸರದಲ್ಲಿ ಯಾರ ಸಹಾಯ ಸಹಕಾರಗಳನ್ನೂ ಬಯಸದೆ, ತಮ್ಮ ಬದುಕಿನ ಸರ್ವಸ್ವವನ್ನೂ ಧಾರೆಯೆರೆದು ಮುದ್ದುಶ್ರೀ ದಿಬ್ಬದಂತಹ ಅಪರೂಪದ ರಂಗ ಶಿಕ್ಷಣ ಕೇಂದ್ರವನ್ನು ತೆರೆದು ಸಮಾಜಕ್ಕೆ ಅರ್ಪಿಸಿರುವ ಡಾ, ಬೈರೇಗೌಡರು ನಾಡಿಗೆ ಮಾದರಿಯಾಗಿದ್ದಾರೆಂದು ಶ್ಲಾಘಿಸಿದರು.
ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಮಾತನಾಡಿ ರಂಗಭೂಮಿಯ ಮೂಲಕವೇ ನಮ್ಮ ನೆಲದ ಸೊಗಡನ್ನು ಪಸರಿಸುವ ಕಾರ್ಯದಲ್ಲಿ ನಿರತರಾಗಲು ಸಾರ್ವಜನಿಕರು ಮತ್ತು ಸರ್ಕಾರದ ಸಹಭಾಗಿತ್ವ ಸಹಾಯ ಸಹಕಾರ ಈಗ ಅಗತ್ಯವಿದೆ. ಜನರ ಆಲೋಚನೆಗಳ ಅಭಿರುಚಿಯ ಅಭಿವೃದ್ಧಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುವ ಹೊಣೆಗಾರಿಕೆ ಸಂಘ ಸಂಸ್ಥೆಗಳ ಮೇಲಿದೆ. ಹಾಗೆಯೇ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿ ಶೈಕ್ಷಣಿಕ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿರುವ ರಂಗಭೂಮಿಗೆ ಕಾಯಕಲ್ಪ ಆಗಬೇಕಾಗಿದೆ.












