ವಿಜಯ ದರ್ಪಣ ನ್ಯೂಸ್….
ಮುಳ್ಳಿನ ನಡುವೆ ಅರಳಿದ ಹೂವು
ಹೂವಿನ ಗಿಡ ಮುಳ್ಳಾದರೂ
ಹೂವು ಎಂದಿಗೂ ಮುಳ್ಳಲ್ಲ
ಬೆಳೆದು ಬಂದ ಹಾದಿ ಮುಳ್ಳಾದರೂ
ಅದರ ಮನಸು ಮುಳ್ಳಲ್ಲ
ಮುಳ್ಳಿನಿಂದ ಮುಳ್ಳಿಗೆ ಬೆಳೆದು
ಮುಳ್ಳಿನ ನೋವನುಂಡರೂ
ಮುಗುಳುನಗೆಯಲಿ ಅರಳಿ
ಮಧುರ ಪರಿಮಳ ಬೀರುವುದು
ಮುಳ್ಳಿಗೆ ಮುಳ್ಳೇ ಸಾಟಿಯಾದರೂ
ಹೂವಿಗೆ ಮುಳ್ಳು ಸಾಟಿಯಲ್ಲ
ಚುಚ್ಚಿದ ಕೊಂಬೆಯ ಮೇಲೆಯೇ ಅರಳಿ
ಚೆಲುವಿನ ಚಿತ್ತಾರ ಬಿಡಿಸುವುದು
ಹೂವಿನ ಸೊಬಗು* *ಬಣ್ಣದಲ್ಲಲ್ಲ
ಹಿರಿಮೆ ಅದರ* *ಪರಿಮಳದಲ್ಲಲ್ಲ
ಕಿತ್ತುಕೊಳ್ಳುವ ಕೈಗೂ
ಸುವಾಸನೆ ನೀಡುವ ಗುಣದಲ್ಲಿದೆ
ಅದಕ್ಕಾಗಿಯೇ ಮನುಜನೇ
ನಿನ್ನ ಮನವು ಹೂವಂತಿರಲಿ
ಬಾಳಿನ ಹಾದಿ ಮುಳ್ಳಾದರೂ
ನಿನ್ನ ನಡತೆ ಹೂವಂತಿರಲಿ
ನೋವು ಕೊಟ್ಟವರ ನೆನಪಿಗೆ
ನೋವನ್ನೇ ಮರಳಿಸದಿರು
ಕಲ್ಲೆಸೆದ ಕೈಗಳಿಗೂ
ಕರುಣೆಯ ಹೂವನ್ನೇ ನೀಡು
ಬೆಳೆದು ಬಂದ ಪರಿಸರ
ನಿನ್ನ ಗುಣವನು ನಿರ್ಧರಿಸದಿರಲಿ
ಕಹಿ ಅನುಭವಗಳ ನೆರಳಲ್ಲೂ
ನಿನ್ನೊಳಗಿನ ಮಧುರತೆ ಬತ್ತದಿರಲಿ
ಮುಳ್ಳಿನ ನಡುವೆ ಅರಳಿದ ಹೂವು
ಪ್ರಕೃತಿಯ ಅಮೂಲ್ಯ ಪಾಠ
ನೋವಿನ ನಡುವೆ ನಗುವ ಮನುಜ
ಜಗದೊಳಗಿನ ನಿಜ ಸೌಂದರ್ಯ
ಹೂವು ಬಾಡಿ ಉದುರಿದರೂ
ಅದರ ಪರಿಮಳ ಉಳಿಯುವುದು
ಮನುಜನು ಮಣ್ಣಾಗಿ ಹೋದರೂ
ಅವನ ಒಳ್ಳೆಯತನ ಉಳಿಯುವುದು
ಆದುದರಿಂದ, ಮನುಜನೇ
ಮುಳ್ಳಿನ ನಡುವೆ ಬೆಳೆದರೂ
ಮುಳ್ಳಾಗಬೇಡ
ಬದುಕಿನ ಬಿಸಿಲು ಸುಟ್ಟರೂ
ಹೂವಿನಂತೆ ಅರಳಿ ಬಾಳು
ನಿನ್ನ ಬದುಕು
ನಿನಗಷ್ಟೇ ಸೊಗಸಾಗಿರದೆ
ನಿನ್ನ ಸುತ್ತಲಿನವರ ಬದುಕಿಗೂ
ಒಂದು ಸುಗಂಧವಾಗಿರಲಿ
✍️ ಎಂಎಂ ದಾವೂದ್











