ವಿಜಯ ದರ್ಪಣ ನ್ಯೂಸ್….
ಸಾಲ ನೀಡದ ಎಂಡಿಸಿಸಿ ಬ್ಯಾಂಕ್ ವಿರುದ್ಧ ರೈತರ ಆಕ್ರೋಶ: ಶಾಸಕ ಜಿ.ಡಿ. ಹರೀಶ್ ಗೌಡ ಎದುರೇ ವಿಷ ಸೇವಿಸಲು ಯತ್ನ

ತಾಂಡವಪುರ ಸೆಪ್ಟೆಂಬರ್ 16 ಸಮಯಕ್ಕೆ ಸರಿಯಾಗಿ ರೈತರಿಗೆ ಸಾಲ ನೀಡದಿರುವುದನ್ನು ಖಂಡಿಸಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ–ಹುಣಸೂರು ಭಾಗದ ರೈತರು ಪ್ರತಿಭಟನೆ ನಡೆಸಿದ ವೇಳೆ ಸಾಲ ಸಿಗದ ರೈತನೊಬ್ಬ ವಿಷದ ಬಾಟಲಿ ಹಿಡಿದು ಆತ್ಮಹತ್ಯೆಗೆ ಮುಂದಾದರು. ತಕ್ಷಣ ಪೊಲೀಸರು ಬಾಟಲಿ ಕಿತ್ತುಕೊಂಡು ಅನಾಹುತ ತಪ್ಪಿಸಿದರೆ, ಶಾಸಕ ಜಿ.ಡಿ. ಹರೀಶ್ ಗೌಡ ಅವರು ರೈತರನ್ನು ಸಮಾಧಾನಪಡಿಸಿದರು.
ಮೈಸೂರಿನಲ್ಲಿ ಇರುವ ಮೈಸೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (MCDCC) ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ಸಾಲ ಮಂಜೂರು ಮಾಡದ ಬ್ಯಾಂಕ್ ಅಧಿಕಾರಿಗಳ ನಡೆಯನ್ನು ಖಂಡಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಾಲ ಮರುಪಾವತಿ ಮಾಡಿದರೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಬ್ಯಾಂಕ್ಗಳು ರೈತರಿಗೆ ಮರುಸಾಲ ನೀಡಲು ಹಿಂದೇಟು ಹಾಕಲಾಗುತ್ತಿದೆ. ಹಳೆಯ ಸಾಲಗಳನ್ನು ತೀರಿಸಿದ್ದರೂ ಹಲವು ರೈತರಿಗೆ ಮತ್ತೆ ಸಾಲ ಪಾವತಿಸುವಂತೆ ಬಾಕಿ ನೋಟಿಸ್ ನೀಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕ್ ವಿರುದ್ಧ ಆರೋಪ:
ಸಹಕಾರ ಕ್ಷೇತ್ರದ ಬ್ಯಾಂಕ್ ರೈತರ ನೆರವಿಗೆ ನಿಲ್ಲಬೇಕಾದರೆ, ಸಾಲ ನೀಡುವ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ. ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್ ಸಾಲವನ್ನೇ ಪ್ರಮುಖವಾಗಿ ಅವಲಂಬಿಸಿರುವ ರೈತರು, ಹೊಸ ಸಾಲ ದೊರೆಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಕ್ಷದ ಆಧಾರದಲ್ಲಿ ಸಾಲ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ರಾಜಕೀಯ ಒತ್ತಡ ಹಾಗೂ ಲಂಚ ನೀಡಿದವರಿಗೆ ಮಾತ್ರ ತಕ್ಷಣ ಸಾಲ ಸಿಗುತ್ತಿದೆ. ರೈತರಿಗೆ ಸಹಕಾರ ನೀಡಬೇಕಾದ ಎಂಡಿಸಿಸಿ ಬ್ಯಾಂಕ್ ಅಧಿಕಾರಿಗಳು ಪಿರಿಯಾಪಟ್ಟಣ ಶಾಸಕರ ಕೈಗೊಂಬೆಯಾಗಿದ್ದು, ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ವಿಷ ಸೇವನೆಗೆ ಯತ್ನ:
ಪ್ರತಿಭಟನೆ ವೇಳೆ ನಂದಿನಾಥಪುರದ ರೈತ ರಂಗಸ್ವಾಮಿ ವಿಷದ ಬಾಟಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಆತ್ಮಹತ್ಯೆಗೆ ಯತ್ನಿಸಿದ ರೈತನ ಕೈಯಲ್ಲಿದ್ದ ವಿಷದ ಬಾಟಲಿಯನ್ನು ವಶಕ್ಕೆ ಪಡೆದರು. ಬಳಿಕ ಶಾಸಕ ಜಿ.ಡಿ. ಹರೀಶ್ ಗೌಡ ಅವರು ರೈತರೊಂದಿಗೆ ಮಾತುಕತೆ ನಡೆಸಿ, ಸಮಾಧಾನಪಡಿಸಿದರು.
ತಾಳಿ ಮಾರಿ ಸಾಲ ಕಟ್ಟಿದ್ದೇವೆ:
ಪ್ರತಿಭಟನೆಯಲ್ಲಿ ರೈತರು ತಮ್ಮ ಅಸಮಾಧಾನವನ್ನು ತೀವ್ರವಾಗಿ ವ್ಯಕ್ತಪಡಿಸಿದರು. “ತಾಳಿ ಮಾರಿ ಸಾಲ ಕಟ್ಟಿದ್ದೇವೆ. ಕಾಲಕಾಲಕ್ಕೆ ಪಡೆದ ಸಾಲವನ್ನು ಮರುಪಾವತಿ ಮಾಡಿದ್ದರೂ ನಮಗೆ ಹೊಸ ಸಾಲ ನೀಡುತ್ತಿಲ್ಲ. ಬ್ಯಾಂಕ್ ಸಾಲ ನಂಬಿಕೊಂಡು ಬೆಳೆ ಬೆಳೆಯುತ್ತಿದ್ದೇವೆ.
ಆದರೆ ಈಗ ಸಾಲ ನೀಡದೇ ಬ್ಯಾಂಕ್ ಸಿಬ್ಬಂದಿ ಅನಗತ್ಯವಾಗಿ ಸತಾಯಿಸುತ್ತಿದ್ದಾರೆ. ನಮಗೆ ಸಾಲ ನೀಡದಿದ್ದರೆ ಏನು ಮಾಡಬೇಕು? ವಿಷ ಕುಡಿದು ಸಾಯಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ. ಮಹದೇವ್, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ ಸೇರಿದಂತೆ ಹಲವು ಮುಖಂಡರು, ರೈತರು ಹಾಗೂ ಪಿರಿಯಾಪಟ್ಟಣ–ಹುಣಸೂರು ಭಾಗದ ನೂರಾರು ರೈತರು ಭಾಗವಹಿಸಿದ್ದರು.
ಸಮಸ್ಯೆ ಆಲಿಸಿದ ಜಿಡಿ ಹರೀಶ್ ಗೌಡ :
ರೈತರು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಅವರು, ರೈತರ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವಲ್ಲಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಈ ವೇಳೆ ರೈತರ ಅಹವಾಲು ಆಲಿಸಿದ ಜಿ.ಟಿ. ಹರೀಶ್ ಗೌಡ ಅವರು, ಆತ್ಮಹತ್ಯೆಯಂತಹ ತೀರ್ಮಾನ ಕೈಗೊಳ್ಳದಂತೆ ಮನವಿ ಮಾಡಿದರು.











