ಸಿರಿಧಾನ್ಯ ಸೇವನೆಯಿಂದ ಆರೋಗ್ಯ ವೃದ್ಧಿ: ಸಚಿವ ಕೆ.ಹೆಚ್. ಮುನಿಯಪ್ಪ
ವಿಜಯ ದರ್ಪಣ ನ್ಯೂಸ್…
ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ: ಸಚಿವರಿಂದ ಚಾಲನೆ
ಸಿರಿಧಾನ್ಯ ಸೇವನೆಯಿಂದ ಆರೋಗ್ಯ ವೃದ್ಧಿ: ಸಚಿವ ಕೆ.ಹೆಚ್. ಮುನಿಯಪ್ಪ

ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜ. 19:
ಆಧುನಿಕ ಜೀವನ ಶೈಲಿಯಿಂದ ಮುನುಷ್ಯನ ಆಯಸ್ಸು ಕ್ಷೀಣಿಸುತ್ತಿದೆ, ನಮ್ಮ ಆರೋಗ್ಯವನ್ನು ಸಮತೋಲನದಿಂದ ಕಾಪಾಡಿಕೊಳ್ಳಲು ಸಾಂಪ್ರದಾಯಿಕ ಪದ್ದತಿಯ ಸಿರಿಧಾನ್ಯಗಳ ಆಹಾರ ಸೇವನೆಗೆ ಮರಳಬೇಕಿದೆ, ದಿನಂಪ್ರತಿ ನವಣೆ, ಸಜ್ಜೆ, ಉದ್ದು, ರಾಗಿ ಮತ್ತು ಜೋಳದಂತ ಸಿರಿಧಾನ್ಯ ಆಹಾರ ಸೇವನೆ ರೂಡಿಸಿಕೊಳ್ಳುವದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಹೇಳಿದರು.
ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾದ “ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ” ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದಲ್ಲಿ ಹಿಂದಿನ ಕಾಲದಲ್ಲಿ ಪೂರ್ವಜರು 75 ಭಾಗದಷ್ಟು ಕೃಷಿ ಕೆಲಸದಲ್ಲಿ ತೊಡಗಿ, ಸಿರಿಧಾನ್ಯ ಪದಾರ್ಥಗಳ ಗುಣಮಟ್ಟದ ಆಹಾರ ಹಾಗೂ ಹಣ್ಣು-ಹಂಪಲು ಸೇವಿಸುತ್ತಾ, ಗಟ್ಟಿ ಶರೀರದಿಂದ 100 ವರ್ಷ ಜೀವಿಸುತ್ತಿದ್ದರು. ಅಂದಿನ ಆಹಾರ ಪದ್ಧತಿಯಿಂದ ಸಮತೋಲನ ಜೀವನ ನಡೆಸಲು ಸಾಧ್ಯವಾಗುತ್ತಿತ್ತು ಎಂದರು.

ಇಂದಿನ ಪೀಳಿಗೆ ಫಾಸ್ಟ್ ಫುಡ್ ಸೇವನೆ ಮೊರೆ ಹೋಗುತ್ತಿದ್ದಾರೆ. ತಿನ್ನಲು ರುಚಿ ರುಚಿಯಾಗಿದ್ದರು ಆರೋಗ್ಯ ಮೇಲೆ ಪ್ರಭಾವ ಬೀರುತ್ತದೆ. ಇಂದಿನ ಯುವಪೀಳಿಗೆ ಸಿರಿಧಾನ್ಯಗಳ ಆಹಾರ ಸೇವನೆ ಬಗ್ಗೆ ಜಾಗೃತಿ ಅತ್ಯವಶ್ಯವಾಗಿದೆ. ಜತೆಗೆ ಬರ್ತ್ ಡೇ ಸಮಯದಲ್ಲಿ ಮಕ್ಕಳಿಗೆ ಕೇಕ್ ಬದಲು ಸಿರಿಧಾನ್ಯ, ಹಾಲು, ರಾಗಿ ಮೀಲ್ಟ್ ಸೇವನೆಗೆ ನೀಡಬೇಕು. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ವೃದ್ಧಿಗೂ ಸಹಕಾರಿಯಾಗುತ್ತದೆ. ಇದರ ಅರಿವು ಮೂಡಿಸುವ ಜವಬ್ದಾರಿ ಪ್ರತಿಯೊಬ್ಬ ಪಾಲಕರ ಮೇಲಿದೆ ಎಂದು ಸಚಿವರು ಕಿವಿ ಮಾತು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರೋಗ್ಯ ವೃದ್ಧಿಸುವ ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡಿ, ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹಿಸುತ್ತಿದೆ ಎಂದರು.
ದೇವನಹಳ್ಳಿ ಟೌನ್ ಕ್ರೀಡಾಂಗಣದಿಂದ ನಗರದ ವಿವಿಧ ರಸ್ತೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಸಿರಿಧಾನ್ಯ ಜಾಗೃತಿ ನಡಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಿ.ರಾಜಣ್ಣ, ತಾಲ್ಲೂಕು ಅಧ್ಯಕ್ಷರಾದ ಸಿ.ಜಗನ್ನಾಥ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕಲಾವತಿ, ಸಹಾಯಕ ನಿರ್ದೇಶಕರಾದ ಸುಶೀಲಮ್ಮ, ಕೆಪಿಸಿಸಿ ಸದಸ್ಯರಾದ ಚಿನ್ನಪ್ಪ, ತಹಶೀಲ್ದಾರ್ ಅನಿಲ್ ಕುಮಾರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಎಸ್. ರವಿಕುಮಾರ್ ಸೇರಿ ಕೃಷಿಕ ಸಮಾಜದ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
