ವಿಜಯ ದರ್ಪಣ ನ್ಯೂಸ್…..
ನಾನೊಬ್ಬ ಪಾತ್ರಧಾರಿ ಭಗವಂತ ನಮ್ಮೆಲ್ಲರ ಸೂತ್ರಧಾರಿ: ಸಾಹಿತಿ ಮಣ್ಣೆ ಮೋಹನ್

ಬೆಂಗಳೂರು: ನಾವು ಕೇವಲ ನಿಮಿತ್ತ ಮಾತ್ರ, ನಾನೇ ಎಲ್ಲವನ್ನೂ ಮಾಡಿದೆ ಎನ್ನುವುದಕ್ಕಿಂತ, ಭಗವಂತನ ಆಜ್ಞೆಯಂತೆ ಎಲ್ಲವೂ ನಡೆಯುತ್ತಿದೆ, ಭಗವಂತನೇ ನಮ್ಮೆಲ್ಲರ ಸೂತ್ರಧಾರಿ ಅವನು ಆಡಿಸಿದ ಹಾಗೆ ನಾವು ಆಡುತ್ತಿದ್ದೇವೆ ಎಂದು ಖ್ಯಾತ ಅಂಕಣಕಾರ ಮತ್ತು ಸಾಹಿತಿ ಮಣ್ಣೆ ಮೋಹನ್ ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದರು.
ಧಾರವಾಡದ ಬೇಂದ್ರೆ ಸಾಹಿತ್ಯ ಸ್ಮಾರಕ ಟ್ರಸ್ಟ್ ನಲ್ಲಿ ಜ್ಞಾನಗಂಗಾ ಸಾಹಿತ್ಯರಂಗ ವೇದಿಕೆಯು ಹಮ್ಮಿಕೊಂಡಿದ್ದ ಸಾಧನಕೇರಿಯಲ್ಲಿ ಜ್ಞಾನ ಗಂಗಾ ಕಲರವ ಸಾಹಿತ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಜ್ಞಾನ ಗಂಗಾ ಸಾಹಿತ್ಯ ರಂಗದ ಮೂಲಕ ಒಂದು ಸಾವಿರ ಜನ ಎಲೆಮರೆ ಕಾಯಿಯಂತಿರುವ, ಪ್ರತಿಭಾವಂತ ಕವಿಗಳ ಪುಸ್ತಕಗಳನ್ನ ಹೊರ ತರಬೇಕೆನ್ನುವ ಹೆಬ್ಬಯಕೆ ನಮ್ಮದಾಗಿದ್ದು, ಈ ನಿಟ್ಟಿನಲ್ಲಿ ಶಬರಿಮಲೆ, ರಾಮೇಶ್ವರ, ಪ್ರಯಾಗ್ ರಾಜ್, ಕಾಶಿ, ಚಿತ್ರಕೂಟ, ಮಹಾಕುಂಭಮೇಳದಲ್ಲೂ ನಮ್ಮ ಪುಸ್ತಕ ಬಿಡುಗಡೆಯಾಗಿವೆ.
ನೇಪಾಳದ ಪಶುಪತಿ ದೇವಾಲಯದಲ್ಲೂ ಜ್ಞಾನಗಂಗಾ ಸಾಹಿತ್ಯರಂಗದ ವೇದಿಕೆಯು ಪುಸ್ತಕ ಬಿಡುಗಡೆ ಮಾಡಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು.
ಹೀಗೆ ಮುಂದುವರಿದು ಮಾತನಾಡಿದ ಮಣ್ಣೆ ಮೋಹನ್ ರವರು ನಾನೊಬ್ಬನೇ ಬರೆದರೆ ಕೇವಲ ಒಂದು ಚಿಂತನೆ ಆದರೆ ಸಾವಿರ ಜನ ಬರೆದರೆ ಸಾವಿರ ಚಿಂತನೆಗಳು ನಾಡಿಗೆ ಲಭಿಸುತ್ತವೆ ಎಂಬ ಆಶಯವನ್ನು ವ್ಯಕ್ತಪಡಿಸಿದ ಮೋಹನ್ ರವರು, ನಮ್ಮ ವೇದಿಕೆಯು ಹೆಚ್ಚಾಗಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡುವ ಆಕಾಂಕ್ಷೆಯನ್ನು ಹೊಂದಿದ್ದು, ಈ ದಿಸೆಯಲ್ಲಿ ಈ ಕಾರ್ಯಕ್ರಮದಲ್ಲಿ ಕೇವಲ 15 ಪುರುಷರ ಕೃತಿಗಳು ಹಾಗೂ 25 ಮಹಿಳೆಯರ ಕೃತಿಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಶ್ಲಾಘಿಸಿದರು.
ಕೇವಲಎರಡು ಮೂರು ದಶಕಗಳಿಂದ ಮಾತ್ರವೇ ಮಹಿಳೆಯರ ಸಾಹಿತ್ಯ ಹೊರ ಹೊರ ಬಂದಿದ್ದು, ಈ ನಿಟ್ಟಿನಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿ ಪ್ರೋತ್ಸಾಹಿಸುವುದರಲ್ಲಿ ಸದಾ ನಾವು ಒಂದು ಹೆಜ್ಜೆ ಮುಂದಿದ್ದೇವೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಖ್ಯಾತ ಸಾಹಿತಿ ಡಾ ಸತ್ಯಮೂರ್ತಿ ಗೂಗಿ ಅವರು ಮಾತನಾಡಿ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು, ಈ ನಿಟ್ಟಿನಲ್ಲಿ ಮಣ್ಣೆ ಮೋಹನ್ ರವರು ಸದಾ ಹೊಸ ಪ್ರತಿಭೆ ಹಾಗೂ ಸಾಹಿತಿಗಳ ಬೆನ್ನೆಲುಬಾಗಿದ್ದು, ನಾವೆಲ್ಲರೂ ಮೋಹನ್ ಗುರುಗಳೊಂದಿಗೆ ಕೈಜೋಡಿಸಬೇಕಿದೆ ಎಂದು ಸಾಹಿತಿಗಳಲ್ಲಿ ಮನವಿ ಮಾಡಿದರು.
ಕೇವಲ ಒಂಬತ್ತು ಜನ ನಿಸ್ವಾರ್ಥಿ ಹಾಗೂ ಪ್ರಾಮಾಣಿಕ ಮನಸ್ಸುಳ್ಳ ವ್ಯಕ್ತಿಗಳು ನನ್ನ ಜೊತೆ ಇದ್ದರೆ ಸಾಕು, ಈ ದೇಶದ ಚಿತ್ರಣವನ್ನೇ ಬದಲಿಸಬಲ್ಲೆ ಎಂದು ಸ್ವಾಮಿ ವಿವೇಕಾನಂದರು ನುಡಿಯುತ್ತಿದ್ದರು. ಈ ದಿಸೆಯಲ್ಲಿಯೇ ಜ್ಞಾನಗಂಗಾ ಸಾಹಿತ್ಯರಂಗದ ಆಶಯಗಳು ಸಾಗಲಿ ಎಂದು ಹಾರೈಸಿದರು
ಸಾಹಿತಿಗಳಾದ ಸಿ.ಡಿ ಕೃಷ್ಣಮೂರ್ತಿ,ಎಚ್.ಎನ್ ಸುಮಲತಾ, ರತ್ನ ಟಿ ಎಚ್, ಪುಷ್ಪ ಎಚ್ ಡಿ ರೇಣುಕಾ, ಅಕ್ಕಮಹಾದೇವಿ,ಚಂದ್ರು ಶಿವಕುಮಾರ್ ಹರಳೂರು, ಬೋಗಣ್ಣ ಕಾಳೇನಹಳ್ಳಿ, ಬಿ ಆರ್ ಪ್ರದೀಪ್ ಕುಮಾರ್, ಉಮೇಶ್ ಯಲಚಗೆರೆ, ಸುರೇಂದ್ರ ಆನೇಕಲ್, ಸುರೇಶ್ ಕೌಜಲಗಿ,ಕಮಲಾಕ್ಷಿ ಕೌಜಲಗಿ, ಲಲಿತಾ ಬಿಟ್ಟಿರಾ ಇನ್ನೂ ಅನೇಕ ಸಾಹಿತಿಗಳು ಹಾಜರಿದ್ದರು.










