ಸಾಮಾಜಿಕ ಜಾಲತಾಣಗಳಿಂದ ಮಕ್ಕಳನ್ನು ರಕ್ಷಿಸಲು, ಅರಿವು ಕೇಂದ್ರ ಸಹಕಾರಿ

ಶಿಡ್ಲಘಟ್ಟ : ರಜೆ ಬಂತೆಂದರೆ ಸಾಕು, ಮಕ್ಕಳನ್ನು ಮನೆಗಳಲ್ಲಿ ಹಿಡಿದಿಟ್ಟುಕೊಳ್ಳಲು ಪೋಷಕರು ಹೆಣಗಾಡುತ್ತಾರೆ. ಅವರನ್ನು ಬಿಸಿಲಿನಿಂದ ರಕ್ಷಣೆ ಮಾಡುವುದಕ್ಕಾಗಿ, ಇವರನ್ನು ಸಮಾಧಾನ ಪಡಿಸಲು ಅನಿವಾರ್ಯವಾಗಿ ಮೊಬೈಲ್ ಕೊಟ್ಟು ಕೂರಿಸುತ್ತಾರೆ.
ಮನೆಗಳಲ್ಲಿ ಉಳಿಯುವ ಮಕ್ಕಳು ಮೊಬೈಲ್, ಯೂಟ್ಯೂಬ್, ಫೇಸ್ಟುಕ್, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗುತ್ತಾರೆ . ಇದರಲ್ಲಿ ಕಾಲಹರಣ ಮಾಡುವುದೇ ಹೆಚ್ಚು, ಇದರೊಂದಿಗೆ ಯಾರನ್ನು ಬೆರೆಯದೇ ಒಂಟಿಯಾಗುವ ಮಕ್ಕಳನ್ನು ಮೊಬೈಲ್ ಚಟದಿಂದ ಬಿಡಿಸಿ ಅವರ ಮೆದುಳನ್ನು ಚುರುಕುಗೊಳಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಿದ್ದಾರೆ
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಕೇಂದ್ರ ತೆರೆದಿದ್ದು, ಶಾಲೆಗೆ ರಜೆ ಇರುವಾಗ ಮಕ್ಕಳು ಸುಡುವ ಬಿಸಿಲಿನಲ್ಲಿ ಹೋಗಿ ಆಟವಾಡುವ ಬದಲಿಗೆ ಅರಿವು ಕೇಂದ್ರಕ್ಕೆ ಬಂದು, ಇಲ್ಲಿ ಕೇರಂ ,ಚೆಸ್, ಹಾವು ಏಣಿ ಆಟ ಸೇರಿದಂತೆ ವಿವಿಧ ಬಗೆಯ ಆಟಗಳನ್ನು ಆಡುವ ಮೂಲಕ ಮತ್ತಷ್ಟು ಚುರುಕುಗೊಳಿಸಲು ಸಾಧ್ಯವಾಗುತ್ತಿದೆ. ಅರಿವು ಕೇಂದ್ರದಲ್ಲಿ ದಿನಪತ್ರಿಕೆಗಳು ಸೇರಿದಂತೆ ಕಥೆ, ಕಾದಂಬರಿಗಳು, ಕಲೆ ,ಸಾಹಿತ್ಯ, ನಾಟಕ, ಇತಿಹಾಸ, ಆರೋಗ್ಯ, ಕೃಷಿ, ಶಿಕ್ಷಣ, ಪಠ್ಯಪುಸ್ತಕ ವಿಜ್ಞಾನ ಚರಿತ್ರೆ, ಕಾನೂನು, ಪಂಚಾಯತ್ ರಾಜ್, ಸ್ಪರ್ಧಾತ್ಮಕ ಪುಸ್ತಕಗಳು ಸೇರಿದಂತೆ ಮಕ್ಕಳಲ್ಲಿ ಜ್ಞಾನ ಕೌಶಲ್ಯವನ್ನು ಬೆಳೆಸುವುದಕ್ಕೆ ಹೆಚ್ಚು ಉಪಯೋಗವಾಗುತ್ತಿದೆ.
ಮಕ್ಕಳು ದಿನಪತ್ರಿಕೆ, ಪುಸ್ತಕ ಓದುವ ಹವ್ಯಾಸ ಬೆಳೆಸುವ ಜೊತೆಗೆ ಕಂಪ್ಯೂಟರ್, ಪೇಂಟಿಂಗ್ ತರಬೇತಿ ಸಹ ನೀಡಲಾಗುತ್ತದೆ. ದೇಸಿ ಕ್ರೀಡೆಗಳ ಝಲಕ್ ಸಹ ಇಲ್ಲಿ ನೋಡಲು ಸಿಗುತ್ತದೆ. ರೈತರ, ಕೂಲಿ ಕಾರ್ಮಿಕರ, ನರೇಗಾ ಕಾರ್ಮಿಕರ ಮಕ್ಕಳಿಗಾಗಿ ಈ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು, ಮಕ್ಕಳಿಗೆ ಆಟ ಪಾಠದ ಜೊತೆಗೆ ತಂತ್ರಜ್ಞಾನ ತರಬೇತಿ, ಐತಿಹಾಸಿಕ ಪರಂಪರೆ ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಗ್ರಂಥಪಾಲಕ ಅಭಿಷೇಕ್ ಹೇಳುತ್ತಾರೆ.
15ನೇ ಹಣಕಾಸು ಯೋಜನೆಯ ಆರ್.ಡಿ.ಪಿ.ಆರ್ ನ ಓದು ಬೆಳಕು ಯೋಜನೆಯಡಿ ಈ ಅರಿವು ಕೇಂದ್ರ ಸ್ಥಾಪಿಸಲಾಗಿದ್ದು , ಗ್ರಾಮೀಣ ಭಾಗದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ದ್ವೇಯದೊಂದಿಗೆ ನಡೆಸಲಾಗುತ್ತಿದ್ದು ,ಇಂತಹ ಸೌಕರ್ಯಗಳನ್ನು ಮಕ್ಕಳು ಸದುಪಯೋಗ ಮಾಡಿಕೊಳ್ಳಬೇಕು. ಪೋಷಕರು ಸಹ ಮಕ್ಕಳನ್ನು ಪ್ರೋತ್ಸಾಹಗೊಳಿಸುವಂತಹ ಕೆಲಸ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ ವಿ ಶಾರದ ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಕೇಂದ್ರ ತೆರೆದಿರುವುದರಿಂದ ನಮಗೆ ತುಂಬಾ ಉಪಯೋಗ ವಾಗಿದೆ. ರಜೆಯಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ ಎಂದು ಚಿಂತೆ ಯಾಗಿತ್ತು. ಬೇಸಿಗೆಯಲ್ಲಿ ಎಲ್ಲೆಂದರಲ್ಲಿ ಸುತ್ತಾಡುತ್ತಾರೆ ಎನ್ನುವ ಭಯ ಕಾಡುತ್ತಿತ್ತು. ಅರಿವು ಕೇಂದ್ರಕ್ಕೆ ಹೋಗಿ ಆಟವಾಡುತ್ತಾರೆ ನಮಗೆ ಒತ್ತಡವಿಲ್ಲ
ಅರುಣ ಪೋಷಕಿ, ಮೇಲೂರು











