ವಿಜಯ ದರ್ಪಣ ನ್ಯೂಸ್….
ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ತಾಂಡವಪುರ ಏಪ್ರಿಲ್ 16 ಮೈಸೂರು ಜಿಲ್ಲೆಯ: ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಗ್ರಾಮ ಪಂಚಾಯತಿ ನೌಕರರ ಬೇಡಿಕೆ ಈಡೇರಿಕೆಗೆ ನಿರಂತರವಾಗಿ ಹೋರಾಟ ನಡೆಯುತ್ತಲೇ ಇದೆ. ಆದರೆ, ಇದುವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ಕಳೆದ ಡಿ.೨೨ರಂದು ಸಂಘಟನೆಯ ಮುಖಂಡರ ಸಭೆ ಕರೆದು ಬೇಡಿಕೆ ಈಡೇರಿಕೆಯ ಭರವಸೆ ನೀಡಲಾಗಿತ್ತು.
ಆದರೆ, ಭರವಸೆ ನೀಡಿ ೩ ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ೧೯ ಬೇಡಿಕೆಗಳಲ್ಲಿ ಸರ್ಕಾರದ ಹಂತದಲ್ಲಿರುವ ಬೇಡಿಕೆಗಳನ್ನು ಹೊರತುಪಡಿಸಿ ಪ್ರಮುಖವಾಗಿರುವ ೭ ಬೇಡಿಕೆಗಳನ್ನು ಈಡೇರಿಸಿ ಆದೇಶ ನೀಡುವುದಾಗಿ ನೀಡಿದ್ದ ಭರವಸೆ ಸಾಕಾರವಾಗಿಲ್ಲ.
ಇಲ್ಲಿವರೆಗೆ ಒಂದೇ ಒಂದು ಬೇಡಿಕೆ ಈಡೇರಿಸದೇ ಇರುವುದು ವಿಷಾದನೀಯ ಎಂದು ಕಿಡಿ ಕಾರಿದರು.
ನಮ್ಮ ಮನವಿಗೆ ಸ್ಪಂದಿಸದಿದ್ದರೆ ಬೃಹತ್ ಪ್ರಮಾಣದಲ್ಲಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು. ಈ ಹೋರಾಟದಲ್ಲಿ ಏನಾದರೂ ಅನಾಹುತಗಳಾದರೆ ಇದಕ್ಕೆ ನೇರವಾಗಿ ಆರ್ಡಿಪಿಆರ್ ಇಲಾಖೆಯೆ ಹೊಣೆ ಎಂದು ಎಚ್ಚರಿಕೆ ನೀಡಿದರು.
ಬೇಡಿಕೆಗಳು: ಎಲ್ಲ ನೌಕರರಿಗೆ ೫೦೦೦ ರೂ. ವೇತನ ಹೆಚ್ಚಳ ಮಾಡಿ ಇಲಾಖೆಯಿಂದ ಆದೇಶ ಹೊರಡಿಸಬೇಕು. ನೌಕರರು ನಿವೃತ್ತಿ, ನಿಧನ ಹೊಂದಿದರೆ ಅವರಿಗೆ ೬ ಲಕ್ಷ ರೂ ಇಡುಗಂಟು ನೀಡಬೇಕು. ಸೇವಾ ಹಿರಿತನದ ಆಧಾರದಲ್ಲಿ ವೇತನ ನೀಡಬೇಕು. ಸ್ವಚ್ಛವಾಹಿನಿ ನೌಕರರ ಸಭೆ ಮಾಡಿ ಅವರ ಪ್ರಮುಖ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು.
ಪ್ರತಿಯೊಂದು ಪಂಚಾಯತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬಬೇಕು. ಕಳೆದ ೧೮-೨೦ ವರ್ಷಗಳಿಂದ ಡಾಟಾ ಎಂಟ್ರಿ ಆಪರೇಟರ್ಗಳಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಅನುಮೋದನೆ ನೀಡಬೇಕು. ೨ನೇ ಡಾಟಾ ಎಂಟ್ರಿ ಆಪರೇಟರ್ ನೇಮಕಾತಿ ಆಗಬೇಕು ಎಂದು ಆಗ್ರಹಿಸಿದರು.
ಆರೋಗ್ಯದ ಕುರಿತು ಸಿಬ್ಬಂದಿಗಳ ಮಾಹಿತಿಗಾಗಿ ನೀಡಿರುವ ಫಾರ್ಮೆಟ್ ಸರಿಪಡಿಸಬೇಕು. ಬಾಕಿ ಉಳಿದಿರುವ ಎಲ್ಲಾ ನೌಕರರಿಗೆ ಅನುಮೋದನೆ ನೀಡಬೇಕು. ಭವಿಷ್ಯನಿಧಿ ಜಾರಿ ಮಾಡಬೇಕು. ನಿವೃತ್ತಿ ನೌಕರರು ಅಕಾಲಿಕ ಮರಣ ಹೊಂದಿದವರಿಗೆ ಉಪಧನ ಹಾಗೂ ಅನುಕಂಪದ ನೇಮಕಾತಿ ಮಾಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಬಾಕಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಬಸವರಾಜ್, ಕಾರ್ಯದರ್ಶಿ ಟಿ.ಎಸ್.ದಿನೇಶ್, ಖಜಾಂಚಿ ಲೋಕೇಶ್ ಕಿರಿಜಾಜಿ, ಮುಖಂಡರಾದ ಹೆಚ್.ಜೆ.ಜಗದೀಶ್, ಕರಿಗೌಡ, ಸೋಮೇಶ್, ನಂಜುಂಡ ಸ್ವಾಮಿ, ಕೇತುಪುರ ನಾಗರಾಜ್, ರಾಜಣ್ಣ ಹುಲ್ಲಳ್ಳಿ, ಪ್ರಕಾಶ್, ರೇಖಾ, ದಿವ್ಯ, ಗೀತಾ, ಮಹೇಶ್ವರಿ, ರಮೇಶ, ಕೃಷ್ಣ, ವರುಣಾ, ಕಿರಣ್ ಸೇರಿ ಅನೇಕರು ಭಾಗವಹಿಸಿದ್ದರು.











