ವಿಜಯ ದರ್ಪಣ ನ್ಯೂಸ್…
ಪಡಿತರ ಅಕ್ಕಿ ,ರಾಗಿ ಅಕ್ರಮ ದಾಸ್ತಾನು ಆಹಾರ ನಿರೀಕ್ಷಕಿಯಿಂದ ಪತ್ತೆ: ಕ್ರಮಕ್ಕೆ ತಹಶಿಲ್ದಾರ್ ಗೆ ವರದಿ

ಶಿಡ್ಲಘಟ್ಟ : ರಾಜ್ಯವನ್ನು ಹಸಿವು ಮುಕ್ತ ಮಾಡುವ ಸಲುವಾಗಿ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆ ಮೂಲಕ ಬಡವರಿಗೆ ಉಚಿತ ಅಕ್ಕಿ ಮತ್ತು ರಾಗಿ ಪೂರೈಕೆ ಮಾಡಲಾಗುತ್ತಿದೆ ಆದರೆ ಬಡವರ ಆಹಾರ ಧಾನ್ಯವನ್ನು ದುರುಪಯೋಗ ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಸೊಣ್ಣಗಾನಹಳ್ಳಿಯ ಅಂಗಡಿ ಸಂಖ್ಯೆ-45 ರ
ಮಾಲಿಕ ಎಸ್.ವಿ.ರಂಗನಾಥ್ ನಡೆಸುತ್ತಿರುವ ನ್ಯಾಯಬೆಲೆ ಅಂಗಡಿಯಲ್ಲಿ ಸುಮಾರು 53 ಕ್ವಿಂಟಾಲ್ ರಾಗಿ (107 ಚೀಲ) ಹಾಗು 5 ಮೂಟೆ ಅಕ್ಕಿ ಅಕ್ರಮವಾಗಿ ಸಾಗಾಣಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆಹಾರ ಇಲಾಖೆ ಅಧಿಕಾರಿಗಳ ಕಣ್ಣು ತಪ್ಪಿಸಿ ಸರ್ಕಾರಿ ನ್ಯಾಯಬೆಲೆ ಅಂಗಡಿಯ ಮಾಲೀಕರು ಬಡವರಿಗೆ ಸೇರಬೇಕಾದ ರಾಗಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮಸ್ಥರ ದೂರು ನೀಡಿದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಆಹಾರ ಇಲಾಖೆಯ ನಿರೀಕ್ಷಕಿ ವೆಂಕಟಲಕ್ಷ್ಮಿ ಹಾಗು ಸಿಬ್ಬಂದಿ, ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಸೊಣ್ಣಗಾನಹಳ್ಳಿ ಗ್ರಾಮದಲ್ಲಿ ಸ್ಥಳ ಪರಿಶೀಲಿಸಿ ಬಡವರಿಗೆ ಸೇರಬೇಕಾದ ರಾಗಿ ಹಾಗು ಅಕ್ಕಿಯನ್ನು ವಿತರಕರು ಅಕ್ರಮವಾಗಿ ಸರಬರಾಜು ಮಾಡಿರುವ ಅಂಶವನ್ನು ಪತ್ತೆ ಹಚ್ಚಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ವರದಿ ಸಲ್ಲಿಸಿದ್ದಾರೆ.
ತಹಸೀಲ್ದಾರ್ ಗಗನ ಸಿಂಧು ಅವರು ಆಹಾರ ನಿರೀಕ್ಷಕರು ಸಲ್ಲಿಸಿರುವ ವರದಿಯನ್ನು ಆಧರಿಸಿ ಸೊಣ್ಣಗಾನಹಳ್ಳಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಪರವಾನಿಗೆ ಅಮಾನತುಗೊಳಿಸಬೇಕೆಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಶಿಫಾರಸ್ಸು ಮಾಡಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರ ತವರು ತಾಲೂಕಿನಲ್ಲಿಯೇ ಸರ್ಕಾರದ ಆಹಾರ ಧಾನ್ಯಗಳು ದುರುಪಯೋಗ ಆಗುತ್ತಿರುವ ಅಂಶ ಬೆಳಕಿಗೆ ಬಂದಿದ್ದು, ಇಲಾಖೆಯ ಅಧಿಕಾರಿಗಳು ತಾಲ್ಲೂಕು ಮತ್ತು ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಬಡವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಬಾರಿ ಮೇ ಮತ್ತು ಜೂನ್ ತಿಂಗಳ ಆಹಾರ ಧಾನ್ಯಗಳನ್ನು ವಿತರಿಸಲು ಸರಬರಾಜು ಮಾಡಿದೆ.
ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ನ್ಯಾಯಬೆಲೆ ಅಂಗಡಿಯನ್ನು ಹತ್ತಿರದ ನ್ಯಾಯಬೆಲೆ ಅಂಗಡಿಯಾದ ಆರ್.ತ್ಯಾಗರಾಜು ಸಾದಲಿ ಗ್ರಾಮ ಸಂಖ್ಯೆ – 44ಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪಡಿತರ ವಿತರಣಾ ಹಂತದಲ್ಲಿಯೇ ರಾಗಿಯನ್ನು ಅಕ್ರಮವಾಗಿ ಸರಬರಾಜು ಮಾಡಿರುವ ಅಂಶ ತಡವಾಗಿ ಬದುಕಿಗೆ ಬಂದಿರುವುದು ಇಲಾಖೆಗೆ ಮುಜುಗರ ತಂದಿದೆ.









