ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ :ಭೋಗ ನಾಗರಾಜ್
ಶಿಡ್ಲಘಟ್ಟ : ಇಂದಿನ ಆಧುನಿಕ ಯುಗದಲ್ಲಿ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಆಂಧ್ರಪ್ರದೇಶದ ಕೋಲಾಟ ತರಬೇತುದಾರ ಭೋಗ ನಾಗರಾಜ್ ಹೇಳಿದರು.
ತಾಲ್ಲೂಕಿನ ಚಿಕ್ಕತೇಕಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ಕೋಲಾಟ ತಂಡದ ಕಲಾವಿದರು ಕಳೆದ ಎರಡು ತಿಂಗಳಿಂದ ತರಬೇತಿ ಪಡೆದು, ಮೊದಲ ಬಾರಿಗೆ ಸಾರ್ವಜನಿಕವಾಗಿ ಅತ್ಯಾಕರ್ಷಕ ಕೋಲಾಟ ಪ್ರದರ್ಶನ ನೀಡಿದರು.
ಜನಪದ ಕಲೆ ವೈವಿಧ್ಯಮಯವಾಗಿದೆ ,ಜನಪದ ನಮ್ಮ ಹಿರಿಯರು ನಮಗೆ ನೀಡಿರುವ ಅಮೂಲ್ಯವಾದ ಬಳುವಳಿ ಕೋಲಾಟವು ಕೇವಲ ನೃತ್ಯವಲ್ಲ, ಅದು ಗುಂಪಿನಲ್ಲಿ ಬಾಂಧವ್ಯವನ್ನು ಬೆಳೆಸುತ್ತಾ ವೀಕ್ಷಕರಿಗೆ ಸಂತೋಷ ನೀಡುವ ನೈಪುಣ್ಯತೆಯ ಕಲೆ ಎಂದು ಶ್ಲಾಘಿಸಿದರು.
ಈಗಿನ ಯುವ ಜನತೆ ಮೊಬೈಲ್ ರೀಲ್ಸ್, ಟಿವಿ ಮತ್ತು ಸಿನಿಮಾ ಲೋಕದಲ್ಲಿ ಮಗ್ನರಾಗಿರುವ ಇಂದಿನ ದಿನಗಳಲ್ಲಿ, ಗ್ರಾಮದಲ್ಲಿ ನಡೆದ ಈ ಕೋಲಾಟ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.
ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ಸೇರಿದ್ದ ಗ್ರಾಮಸ್ಥರು, ಮಕ್ಕಳು ಮತ್ತು ಮಹಿಳೆಯರು ಗ್ರಾಮದ ಯುವಕರು ಹಾಗೂ ಕಲಾವಿದರು ಪ್ರದರ್ಶಿಸಿದ ಈ ಸಾಂಪ್ರದಾಯಿಕ ಕಲಾ ಪ್ರದರ್ಶನವನ್ನು ವೀಕ್ಷಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕೋಲಾಟ ಕಲಾವಿದರು ಮತ್ತು ತರಬೇತುದಾರರಾದ ಭೋಗ ನಾಗರಾಜ್, ವೇಮು ಮಾಸ್ಟರ್, ಸಂಗೀತ ನಿರ್ದೇಶಕ ಇನಿಮಿಂಚೇನಹಳ್ಳಿ ಶ್ರೀನಿವಾಸ್, ಜನಪದ ಕಲಾವಿದ ಈಧರೆ ಪ್ರಕಾಶ್ ಹಾಗು ಗ್ರಾಮದ ಹಿರಿಯರು ಹಾಗೂ ಯುವಕರು ಪಾಲ್ಗೊಂಡಿದ್ದರು.