ವಿಜಯ ದರ್ಪಣ ನ್ಯೂಸ್…..
ಟಿ.ಎನ್. ನಾರಾಯಣಗೌಡರ 60ನೇ ಜನ್ಮದಿನ ಅಂಗವಾಗಿ ಅನ್ನದಾಸೋಹ

ಬೇಲೂರು: ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎನ್. ನಾರಾಯಣಗೌಡರವರ 60ನೇ ಜನ್ಮದಿನದ ಅಂಗವಾಗಿ ಬೇಲೂರಿನ ಶ್ರೀ ಚೆನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಪ್ರತಿ ವರ್ಷದಂತೆ ಈ ವರ್ಷವೂ ನಾರಾಯಣಗೌಡರವರ ಹೆಸರಿನಲ್ಲಿ ಅನ್ನದಾಸೋಹ ಹಮ್ಮಿಕೊಳ್ಳಲಾಗಿದ್ದು, ಬೇಲೂರು ತಾಲೂಕಿನ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಿಂದಿ ಹೇರಿಕೆ, ಆಂಗ್ಲ ನಾಮಫಲಕಗಳ ಬಳಕೆ ಹಾಗೂ ವಿವಿಧ ಕೇಂದ್ರ ಸಂಸ್ಥೆಗಳ ಕಾರ್ಯವೈಖರಿಯಿಂದ ಕನ್ನಡ ಭಾಷೆ ಮತ್ತು ಕನ್ನಡಿಗರ ಹಿತಾಸಕ್ತಿಗೆ ಧಕ್ಕೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವ ಬಲಿಷ್ಠ ಪ್ರಾದೇಶಿಕ ರಾಜಕೀಯ ಶಕ್ತಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಟಿ.ಎನ್. ನಾರಾಯಣಗೌಡರವರ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷ ಉದಯಿಸಿದರೆ ಕನ್ನಡಿಗರ ಉದ್ಯೋಗ, ರೈತರ ಹಿತಾಸಕ್ತಿ ಹಾಗೂ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗಲಿದೆ ಎಂದು ಹೇಳಿದ ಅವರು, ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಆಶಿಸಿದರು.
ರೈತರ ಸಂಕಷ್ಟದ ಸಂದರ್ಭಗಳಲ್ಲಿ ಟಿ.ಎನ್. ನಾರಾಯಣಗೌಡ ಅವರು ನೆರವಿನ ಹಸ್ತ ಚಾಚಿದ ಉದಾಹರಣೆಗಳನ್ನು ಸ್ಮರಿಸಿದ ಚಂದ್ರಶೇಖರ್, ರೈತ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ
ಮೂಲಕ ಅವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಅವರು ರಾಜ್ಯದ ಜನರ ಹಿತಕ್ಕಾಗಿ ಇನ್ನಷ್ಟು ಪರಿಣಾಮಕಾರಿ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.
ಪ್ರಧಾನ ಕಾರ್ಯದರ್ಶಿ ಖಾದರ್ ಮಾತನಾಡಿ, ರಾಜ್ಯಾಧ್ಯಕ್ಷ ಟಿ.ಎನ್. ನಾರಾಯಣಗೌಡರವರಿಗೆ ಬೇಲೂರು ತಾಲೂಕು ಕರವೇ ಘಟಕ ಹಾಗೂ ತಾಲೂಕಿನ ಸಮಸ್ತ ನಾಗರಿಕರ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.
ಕನ್ನಡ ಭಾಷೆ, ಕನ್ನಡಿಗರ ಹಕ್ಕುಗಳು ಹಾಗೂ ರಾಜ್ಯದ ಸ್ವಾಭಿಮಾನಕ್ಕಾಗಿ ನಾರಾಯಣಗೌಡರು ನಡೆಸಿರುವ ಹೋರಾಟಗಳು ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿವೆ ಎಂದು ಅವರು ಹೇಳಿದರು. ವಿವಿಧ ಉದ್ಯಮ, ವ್ಯಾಪಾರ ಸಂಸ್ಥೆಗಳು ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸುವ ಕುರಿತು ಅವರು ನಡೆಸಿದ ಹೋರಾಟ ಸರ್ಕಾರದ ಗಮನ ಸೆಳೆಯುವಲ್ಲಿಮಹತ್ವದ ಪಾತ್ರ ವಹಿಸಿತು ಎಂದು ತಿಳಿಸಿದರು.
ರಾಜ್ಯದ ಯುವಜನತೆ ಹಾಗೂ ಕನ್ನಡಪರ ಸಂಘಟನೆಗಳು ಕನ್ನಡಿಗರ ಹಿತಾಸಕ್ತಿಯನ್ನು ಪ್ರತಿನಿಧಿಸುವ ಬಲಿಷ್ಠ ನಾಯಕತ್ವದ ನಿರೀಕ್ಷೆಯಲ್ಲಿವೆ ಎಂದು ಅಭಿಪ್ರಾಯಪಟ್ಟ ಖಾದರ್, ನಾರಾಯಣಗೌಡ ರವರ ಮುಂದಿನ ಹೋರಾಟಗಳು ಕನ್ನಡ ನಾಡಿನ ಅಭಿವೃದ್ಧಿ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಮತ್ತಷ್ಟು ಬಲ ನೀಡಲಿ ಎಂದು ಆಶಿಸಿದರು.
ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಇನ್ನಷ್ಟು ಯಶಸ್ಸು ಗಳಿಸಿ, ರಾಜ್ಯದ ಜನರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಲಿ ಎಂದು ಹಾರೈಸಿದ ಅವರು, ಶ್ರೀ ಚೆನ್ನಕೇಶವಸ್ವಾಮಿಯ ಕೃಪಾಶೀರ್ವಾದ ಸದಾ ಅವರ ಮೇಲಿರಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಕರವೇ ಗೌರವ ಕಾರ್ಯದರ್ಶಿ ಮಾಳೆಗೆರೆ ತಾರನಾಥ್, ಮೋಹನ್, ಗಾಯತ್ರಿ, ನರಸಿಂಹ, ಚಂದ್ರು, ಮದನ್ ಬಳ್ಳೂರು ಹಾಗು ಇತರರು ಇದ್ದರು.





