ವಿಜಯ ದರ್ಪಣ ನ್ಯೂಸ್….
KIADB ಬೆಂಗಳೂರು ಕಚೇರಿಯ ಬಳಿ ರೈತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು: ರೈತ ಸಂಘ ಹಾಗು ರೈತರು ರಸ್ತೆಗಿಳಿದು ಪ್ರತಿಭಟನೆ

ಶಿಡ್ಲಘಟ್ಟ : ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಭೂಸ್ವಾಧೀನವನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹಾಗು ಪ್ರಮುಖ ರೈತ ಮುಖಂಡರನ್ನು ಬೆಂಗಳೂರಿನ KIADB ಕಛೇರಿ ಬಳಿ ವಶಕ್ಕೆ ಪಡೆದಿರುವುದನ್ನು ವಿರೋಧಿಸಿ, ರೈತರು ರಸ್ತೆಗಿಳಿದು ತೀವ್ರ ಪ್ರತಿಭಟನೆ ನಡೆಸಿದರು.
ಭೂಸ್ವಾಧೀನ ವಿರೋಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ರೈತರು ಕಳೆದ 95 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ ಇತ್ತೀಚೆಗೆ ಹಮ್ಮಿಕೊಂಡಿದ್ದ “ಬೆಂಗಳೂರು ಚಲೋ ,ಬೈಕ್ ರ್ಯಾಲಿ ” ಯನ್ನು ಪೊಲೀಸರು ತಡೆದಿದ್ದರು ,ಈ ವೇಳೆ ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಜಿ.ಪ್ರಭು ಅವರು, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆಗೆ ದಿನಾಂಕ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದರು .ಈ ಹಿನ್ನೆಲೆಯಲ್ಲಿ ಈ ದಿನ ಮಾತುಕತೆಗಾಗಿ ಬೆಂಗಳೂರಿನ ಕೆಐಎಡಿಬಿ ಕಚೇರಿಗೆ ಇಂದು ತೆರಳಿದ್ದ ವೇಳೆ, ರೈತ ಮುಖಂಡರನ್ನು ಪೊಲೀಸರು ಏಕಾಏಕಿ ಬಂಧಿಸಿದ್ದಾರೆ.
ರೈತ ಸಂಘದ ಮುಖಂಡರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ರೈತರು ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿಯ ಸರ್ಕಲ್ ನಲ್ಲಿ ಮಾನವ ಸರಪಳಿ ರಚಿಸಿ ಚಿಂತಾಮಣಿ ಹಾಗು ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಸಾಗುವ ವಾಹನಗಳನ್ನು ತಡೆದು ಸರ್ಕಾರ ಮತ್ತು ಕೆಐಎಡಿಬಿ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.
ಪರಿಸ್ಥಿತಿಯನ್ನು ತಿಳಿಗೊಳಿಸಲು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸಿದರು.
ಬಂಧನದ ಕುರಿತು ಪತ್ರಿಕೆಗೆ ಮೊಭೈಲ್ ಮೂಲಕ ಪ್ರತಿಕ್ರಿಯಿಸಿದ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, “ನಾವು ಈ ಹಿಂದೆಯೂ ಹಲವು ಬಾರಿ ನೂರಾರು ರೈತರೊಂದಿಗೆ ಕೆಐಎಡಿಬಿ ಕಚೇರಿಗೆ ಬಂದಿದ್ದೆವು ಆದರೆ ಇಂದು ಸಭೆಗೆಂದು ಅಧಿಕೃತವಾಗಿ ಆಹ್ವಾನಿಸಿ, ನಂತರ ನಮ್ಮನ್ನು ಉದ್ದೇಶಪೂರ್ವಕವಾಗಿ ಬಂಧಿಸಲಾಗಿದೆ ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರವು ಮಾತುಕತೆಯ ನೆಪದಲ್ಲಿ ರೈತರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿರುವ ರೈತ ಸಂಘಟನೆಗಳು, ತಮ್ಮ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ಹೋರಾಟವನ್ನು ರಾಜ್ಯಾದ್ಯಂತ ತೀವ್ರಗೊಳಿಸುವುದಾಗಿ ರೈತ ಸಂಘದ ಮುಖಂಡರು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ವೀರಾಪುರ ಮುನಿನಂಜಪ್ಪ ,ತಾದೂರು ಮಂಜುನಾಥ್ ,ಬಿ.ನಾರಾಯಣಸ್ವಾಮಿ ,ವೇಣುಗೋಪಾಲ್ ಹಾಗು ರೈತರು ಪಾಲ್ಗೊಂಡಿದ್ದರು.









