ವಿಜಯ ದರ್ಪಣ ನ್ಯೂಸ್……
ಮಾಜಿ ಉಪ ಪ್ರಧಾನ ಮಂತ್ರಿ ಡಾ. ಬಾಬು ಜಗಜೀವನ ರಾಂ ಅವರ 40ನೇ ಪುಣ್ಯಸ್ಮರಣೆ
ಡಾ. ಬಾಬೂಜೀ ಸಮಾನತೆಗೆ ಹೋರಾಡಿದ ಮಹಾನ್ ನಾಯಕರು: ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 06:
ಭಾರತ ದೇಶದಲ್ಲಿ ಸಾಮಾಜಿಕ ಸಮಾನತೆ ತರಲು ಶ್ರಮಿಸಿದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ ಕೊಡುಗೆಗಳು ಸದಾ ಸ್ಮರಣೀಯವಾಗಿವೆ. ಬಾಬು ಜಗಜೀವನರಾಂ ಅವರು ನಮಗೆಲ್ಲರಿಗೂ ಮಾರ್ಗದರ್ಶಕರು ಅವರ ಬದುಕು ನಮಗೆ ಆದರ್ಶಪ್ರಾಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ. ಬಾಬು ಜಗಜೀವನ ರಾಮ್ ರವರ 40ನೇ ಪುಣ್ಯಸ್ಮರಣೆಯನ್ನು ಪುಷ್ಪ ನಮನ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿ ಅವರು ಮಾತನಾಡಿದರು.
ಭಾರತದ ಉಪ ಪ್ರಧಾನಿಗಳಾಗಿ, ಸಾರಿಗೆ, ರೈಲ್ವೆ, ಕಾರ್ಮಿಕ ಮತ್ತು ಪುನರ್ವಸತಿ, ಆಹಾರ, ಕೃಷಿ, ಸಹಕಾರ, ನೀರಾವರಿ ಸೇರಿದಂತೆ ಹಲವಾರು ಇಲಾಖೆಯ ಸಚಿವರಾಗಿ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಬಾಬೂಜೀ ಅವರು ಭಾರತ ಸಂವಿಧಾನ ರಚನಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಮೇರು ನಾಯಕರಾಗಿದ್ದರು. ಅವರ ಆಶಯದಂತೆ ದೇಶದಲ್ಲಿ ನಾವೆಲ್ಲರೂ ಜಾತಿ-ಭೇದ ತೊರೆದು ಸಮಾನತೆಯಿಂದ ಬದುಕಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಟಿ.ಎಲ್.ಎಸ್. ಪ್ರೇಮಾ, ಸಮಾಜದ ಮುಖಂಡರಾದ ರವಿಕಲಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.











