ವಿಜಯ ದರ್ಪಣ ನ್ಯೂಸ್…..
ಮದ್ಯ ಮಳಿಗೆ ಅಗ್ನಿ ಅವಘಡ ಅಣಕು ಪ್ರದರ್ಶನ
ಮದ್ಯ ಮಳಿಗೆಗಳಲ್ಲಿ ಅಗ್ನಿ ಅವಘಡ ಮುಂಜಾಗ್ರತಾ ಕ್ರಮ ಅತ್ಯವಶ್ಯ: ಅಬಕಾರಿ ಉಪ ಆಯುಕ್ತ ಕ್ಯಾ. ಅಜಿತ್ ಕುಮಾರ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ. 07:
ಜಿಲ್ಲಾ ಅಬಕಾರಿ ಇಲಾಖೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಹೊಸ ಕಟ್ಟಡ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ, ಮದ್ಯ ಮಳಿಗೆಗಳಲ್ಲಿ ಸಂಭವಿಸುವ ಅಗ್ನಿ ಅವಘಡದಿಂದ ಪಾರಾಗುವ ಕುರಿತು ಮದ್ಯದಂಗಡಿಗಳ ಸನ್ನದುದಾರರಿಗೆ ಮತ್ತು ಸಾರ್ವಜನಿಕರಿಗೆ ಅಣಕು ಪ್ರದರ್ಶನದ ಮೂಲಕ ಅರಿವು ಮೂಡಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಉಪ ಆಯುಕ್ತ ಕ್ಯಾ. ಅಜಿತ್ ಕುಮಾರ್ ನೇತೃತ್ವದಲ್ಲಿ ನಡೆದ ‘ಮದ್ಯ ಮಳಿಗೆಯ ಅಗ್ನಿ ಅವಘಡ ಕುರಿತು ಅಣಕು ಪ್ರದರ್ಶನ’ದಲ್ಲಿ ದೇವನಹಳ್ಳಿ ತಾಲೂಕು ಅಗ್ನಿಶಾಮಕ ದಳದ ಅಧಿಕಾರಿಯಾದ ಸುರೇಶ್ ಹಾಗೂ ಸಿಬ್ಬಂದಿಗಳು, ಮದ್ಯದಂಗಡಿ ಮತ್ತು ಬಾರ್ ರೆಸ್ಟೋರೆಂಟ್ ಗಳಲ್ಲಿ ತಕ್ಷಣ ಅಗ್ನಿ ಅವಘಡ ಸಂಭವಿಸಿದರೆ ಏನು ಕ್ರಮಕೈಗೊಳ್ಳಬೇಕು, ಮೊದಲೇ ಬೆಂಕಿ ಅನಾಹುತ ಪತ್ತೆ ಹಚ್ಚುವ, ತಡೆಯುವ ವಿಧಾನಗಳು, ರಕ್ಷಣಾ ಕ್ರಮಗಳು ಮತ್ತು ಸರ್ಕಾರ ನಿಗದಿಪಡಿಸಿರುವ ಕಡ್ಡಾಯ ಸುರಕ್ಷತಾ ಮಾನದಂಡಗಳ ಪಾಲನೆ ಕುರಿತು ಪ್ರಾಯೋಗಿಕವಾಗಿ ಮುಂಜಾಗ್ರತಾ ಅರಿವು ಮೂಡಿಸಿದರು.

ಅಬಕಾರಿ ಉಪ ಆಯುಕ್ತ ಕ್ಯಾ. ಅಜಿತ್ ಕುಮಾರ್ ಮಾತನಾಡಿ, ಜಿಲ್ಲೆಯ ಮದ್ಯದಂಗಡಿ, ಬಾರ್ ಗಳು, ಮತ್ತು ಬಾರ್ ರೆಸ್ಟೋರೆಂಟ್ ಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತ ತಡೆಯುವ ಬಗ್ಗೆ ಅಗ್ನಿ ಶಾಮಕ ದಳ ಮತ್ತು ಅಬಕಾರಿ ಇಲಾಖೆಯೂ ಜಂಟಿಯಾಗಿ ಸನ್ನದುದಾರರಿಗೆ ಅಗ್ನಿ ಅವಘಡ ಕುರಿತು ಅರಿವು ಮೂಡಿಸಲಾಗುತ್ತಿದೆ. ಎಲ್ಲ ಮಾದರಿಯ ಮದ್ಯದಂಗಡಿಗಳು ಅಗ್ನಿ ಸುರಕ್ಷತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಪಾಲಿಸದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಬಕಾರಿ ಅಧೀಕ್ಷಕ ಡಿ.ಎನ್. ತಿಪ್ಪೇಸ್ವಾಮಿ, ಜಿಲ್ಲೆಯ ನಾಲ್ಕು ತಾಲೂಕಿನ ಅಬಕಾರಿ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಮದ್ಯದಂಗಡಿಗಳ ಸನ್ನದುದಾರು ಹಾಜರಿದ್ದರು.










