ವಿಜಯ ದರ್ಪಣ ನ್ಯೂಸ್…
ಬಸ್ ಡಿಕ್ಕಿ: 7 ವರ್ಷದ ಬಾಲಕಿ ಮೃತ್ಯು
ಸುಂಟಿಕೊಪ್ಪದಲ್ಲಿ ಮನಕಲಕುವ ದುರಂತ: ಪೋಷಕರ ಮಡಿಲು ಖಾಲಿ ಮಾಡಿದ ಅಪಘಾತ

ಮಡಿಕೇರಿ: ಸುಂಟಿಕೊಪ್ಪದ KEB ಸಮೀಪ ಇಂದು ಬೆಳಿಗ್ಗೆ ಸುಮಾರು 11.45ರ ವೇಳೆಗೆ ಸಂಭವಿಸಿದ ಹೃದಯವಿದ್ರಾವಕ ರಸ್ತೆ ಅಪಘಾತದಲ್ಲಿ ಅಸ್ಸಾಂ ಮೂಲದ ಕೂಲಿ ಕಾರ್ಮಿಕ ದಂಪತಿಯ 7 ವರ್ಷದ ಪುತ್ರಿ KSRTC ಬಸ್ ಡಿಕ್ಕಿಯಿಂದ ಮೃತಪಟ್ಟಿರುವ ಘಟನೆ ನಡೆದಿದೆ
ಮೂಲತಃ ಅಸ್ಸಾಂ ರಾಜ್ಯದವರಾದ ಸಿರಾಜು ರೆಹಮಾನ್ ಮತ್ತು ಜಹನಾರ್ ದಂಪತಿ ಕೂಲಿ ಕೆಲಸಕ್ಕಾಗಿ ಸುಂಟಿಕೊಪ್ಪಕ್ಕೆ ಆಗಮಿಸಿ ಹೊಸ ಬಡಾವಣೆಯಲ್ಲಿ ವಾಸವಾಗಿದ್ದರು
ಇಂದು ಬೆಳಿಗ್ಗೆ ಹೆದ್ದಾರಿ ಬದಿಯ ಅಂಗಡಿಯೊಂದರಲ್ಲಿ ಮಿಠಾಯಿ ಖರೀದಿಸಿದ ಬಾಲಕಿ ಬಳಿಕ ರಸ್ತೆ ದಾಟಲು ಒಂದೆರಡು ಹೆಜ್ಜೆ ಮುಂದಿಟ್ಟ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ KSRTC ಬಸ್ ಡಿಕ್ಕಿ ಹೊಡೆದಿದೆ
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ತಕ್ಷಣ ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ, ಆಸ್ಪತ್ರೆ ತಲುಪುವ ಮುನ್ನವೇ ಮುಗ್ಧ ಬಾಲಕಿ ಕೊನೆಯುಸಿರೆಳೆದಿದ್ದಾಳೆ
ಈ ದುರಂತದಿಂದ ಪುಟ್ಟ ಕಂದಮ್ಮನನ್ನು ಕಳೆದುಕೊಂಡಿರುವ ಕುಟುಂಬದ ಆಕ್ರಂದನ ಮನಕಲಕುವಂತಿದೆ ಕೂಲಿ ಕೆಲಸಕ್ಕಾಗಿ ದೂರದ ಅಸ್ಸಾಂನಿಂದ ಬಂದಿದ್ದ ಕುಟುಂಬಕ್ಕೆ ಇದೀಗ ತಮ್ಮ ಕಂದಮ್ಮನನ್ನು ಕಳೆದುಕೊಂಡ ನೋವು ಜೀವನಪೂರ್ತಿ ಕಾಡುವಂತಾಗಿದೆ
ಒಂದು ಕ್ಷಣದ ಅಜಾಗರೂಕತೆ ಒಂದು ಕುಟುಂಬದ ಬದುಕನ್ನೇ ಬದಲಿಸಬಹುದು. ರಸ್ತೆ ದಾಟುವಾಗ ಪೋಷಕರು ಮಕ್ಕಳ ಕೈ ಹಿಡಿದುಕೊಳ್ಳಬೇಕು
*ಯಚಾಲಕರು ವಸತಿ ಪ್ರದೇಶ ಶಾಲೆ ಅಂಗಡಿ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ವೇಗವನ್ನು ನಿಯಂತ್ರಿಸಿ ಅತ್ಯಂತ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು
*ರಸ್ತೆ ನಮ್ಮೆಲ್ಲರದ್ದು,
*ಜೀವ ಮಾತ್ರ ಒಂದೇ.
*ವೇಗಕ್ಕಿಂತ ಜೀವ ಅಮೂಲ್ಯ
ಈ ಘಟನೆ ಯಾರನ್ನೂ ದೂಷಿಸುವುದಕ್ಕಿಂತ ಇಂತಹ ಮತ್ತೊಂದು ಅಮಾಯಕ ಜೀವ ಬಲಿಯಾಗದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕೆಂಬ ಕಠಿಣ ಎಚ್ಚರಿಕೆಯಾಗಿದೆ
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ
ಮುಗ್ಧ ಕಂದಮ್ಮನ ಆತ್ಮಕ್ಕೆ ಶಾಂತಿ ಸಿಗಲಿ, ದುಃಖತಪ್ತ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ
✍️ ಎಂಎಂ ದಾವೂದ್









