ವಿಜಯ ದರ್ಪಣ ನ್ಯೂಸ್….
ದೇವನಹಳ್ಳಿ ತಾಲ್ಲೂಕು ಆಡಳಿತ ಸೌಧದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ

ಬೆಂ.ಗ್ರಾ ಜಿಲ್ಲೆ ಸೆ.17:-
ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾದುದು ಎಂದು ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಅನಿಲ್ ಹೇಳಿದರು.
ದೇವನಹಳ್ಳಿ ಟೌನ್ ನ ತಾಲೂಕು ಆಡಳಿತ ಸೌಧದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.
ನಂತರ ಮಾತನಾಡಿ ದೈನಂದಿನ ಜೀವನದಲ್ಲಿ ನಾವು ಬಳಸುವ ವಿಗ್ರಹಗಳು, ಯಂತ್ರಗಳು, ಪೀಠೋಪರಣಗಳು, ದೇವರ ವಿಗ್ರಹಗಳ ಕೆತ್ತನೆಯಲ್ಲಿ ವಿಶ್ವ ಕರ್ಮ ಸಮಾಜದ ಪಾತ್ರ ಅನನ್ಯ, ಇಂದಿಗೂ ಪ್ರತಿನಿತ್ಯ ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯಗಳನ್ನು ಕುಲಕಸುಬನ್ನಾಗಿ ಪರಂಪರೆಯನ್ನು ಉಳಿಸುತ್ತಾ ಬಂದಿರುವುದು ವಿಶ್ವಕರ್ಮರು. ಅವರ ಕೆಲಸದ ಮೇಲಿನ ಶ್ರದ್ಧೆ, ಕಲೆಯ ಜೀವಂತಿಕೆ ಇಂದಿಗೂ ನೋಡಬಹುದು. ಸರ್ಕಾರ ಅವರ ಸೇವೆಯನ್ನು ಗುರುತಿಸಿ ಪ್ರತಿವರ್ಷ ಜಯಂತಿ ಮಾಡಲಾಗುತ್ತದೆ. ವಿಶ್ವಕರ್ಮ ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ ಯೋಜನಾ ನಿರ್ದೇಶಕ ವಿಠಲ್ ಕಾವ್ಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಕಲ್ಪನಾ, ವಿಶ್ವ ಕರ್ಮ ಸಮಾಜದ ಮುಖಂಡರಾದ ಜಿ ನಾರಾಯಣಾಚಾರ್, ಸತ್ಯನಾರಾಯಣಾಚಾರ್, ಸುರೇಶ್, ಶ್ರೀಧರ್, ನಾಗರಾಜ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.










