ಚುನಾವಣೆ ಅಕ್ರಮಗಳ ಬಗ್ಗೆ “ಸಿ-ವಿಜಿಲ್ ಸಿಟಿಜನ್ ಆ್ಯಪ್ ನಲ್ಲಿ ದೂರು ಸಲ್ಲಿಸಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

ವಿಜಯ ದರ್ಪಣ ನ್ಯೂಸ್

ಚುನಾವಣೆ ಅಕ್ರಮಗಳ ಬಗ್ಗೆ “ಸಿ-ವಿಜಿಲ್ ಸಿಟಿಜನ್ ಆ್ಯಪ್ ನಲ್ಲಿ ದೂರು ಸಲ್ಲಿಸಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 04 : ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ಮಾದರಿ ನೀತಿ ಸಂಹಿತೆಯು ಮಾರ್ಚ್ 16 ರಿಂದ ಜಾರಿಯಲ್ಲಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರುಗಳನ್ನು ದಾಖಲಿಸಲು ಭಾರತ ಚುನಾವಣಾ ಆಯೋಗದ “ಸಿ-ವಿಜಿಲ್ ಸಿಟಿಜನ್ ಆ್ಯಪ್ (cVIGIL Citizen Application)” ಅನ್ನು ಬಳಕೆ ಮಾಡಬಹುದಾಗಿದೆ.

ಮೊಬೈಲ್‌ ನ ಪ್ಲೇ-ಸ್ಟೋರ್‌ನಲ್ಲಿ ಲಭ್ಯವಿರುವ ಸಿ-ವಿಜಿಲ್ ಸಿಟಿಜನ್ ಆ್ಯಪ್ (CVIGIL Citizen Application)ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮ‌ೂಲಕ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ದೂರುಗಳನ್ನು ದಾಖಲು ಮಾಡಲು ಚುನಾವಣಾ ಆಯೋಗವು ಮತದಾರರಿಗೆ/ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ.
ಫೋನ್‌ ನಲ್ಲಿ ಸೆರೆಹಿಡಿಯಲಾದ ವಿಡಿಯೋ ಅಥವಾ ಫೋಟೋ ರೂಪದ ದಾಖಲೆಗಳ ಮೂಲಕ ಸುಲಭವಾಗಿ ದೂರು ಸಲ್ಲಿಸಬಹುದು. ಈ ಆಪ್‌ ಜಿಪಿಎಸ್ ಆಧಾರಿತವಾಗಿ ಕೆಲಸ ಮಾಡಲಿದ್ದು, ದೂರು ಸಲ್ಲಿಸುವ ವಿಳಾಸ ಚುನಾವಣಾ ಆಯೋಗಕ್ಕೆ ಹಾಗೂ ಸಂಬಂಧಿಸಿದ ಪೊಲೀಸರಿಗೆ ತಿಳಿಯುತ್ತದೆ. ಇದರಿಂದ ಆರೋಪಿತರನ್ನು ಸುಲಭವಾಗಿ ಪತ್ತೆಮಾಡಲು ಸಹಕಾರಿಯಾಗಲಿದೆ.

ಯಾವ ಸಮಯದಲ್ಲಿ ದೂರನ್ನು ಸಲ್ಲಿಸಬಹುದು.
ಹಣ ಹಂಚುವುದು, ಉಡುಗೊರೆಗಳು/ಕೂಪನ್‌ಗಳ ವಿತರಣೆ, ಮದ್ಯ ವಿತರಣೆ, ಅನುಮತಿಯಿಲ್ಲದೆ ಪೋಸ್ಟರ್‌ಗಳು ಬ್ಯಾನರ್‌ಗಳನ್ನು ಹಂಚುವುದು, ಬಂದೂಕುಗಳ ಪ್ರದರ್ಶನ, ಬೆದರಿಕೆ, ಅನುಮತಿಯಿಲ್ಲದೆ ವಾಹನಗಳು ಅಥವಾ ಬೆಂಗಾವಲುಗಳನ್ನು ಬಳಕೆ ಮಾಡುವುದು, ಪಾವತಿಸಿದ ಸುದ್ದಿ ಆಸ್ತಿ ವಿರೂಪಗೊಳಿಸುವಿಕೆ, ಮತದಾನದ ದಿನದಂದು ಮತದಾರರ ಸಾಗಣೆ, ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ, ಧಾರ್ಮಿಕ ಅಥವಾ ಕೋಮು ಭಾಷಣಗಳು ಸಂದೇಶಗಳು, ಅನುಮತಿಸಲಾದ ಸಮಯವನ್ನು ಮೀರಿ ಸ್ಪೀಕರ್‌ಗಳ ಬಳಕೆ, ರ್ಯಾಲಿಗಳಿಗೆ ಸಾರ್ವಜನಿಕರ ಸಾರಿಗೆ ಬಳಕೆ ಸೇರಿದಂತೆ ಇನ್ನಿತರೆ ದೂರುಗಳನ್ನು ಸಲ್ಲಿಸಬಹುದು.
ದೂರು ಸಲ್ಲಿಸಿದ ನಂತರ ರಶೀದಿ ದೊರೆಯಲಿದ್ದು, ಅದು ಯಾವ ಹಂತದ ವಿಚಾರಣೆಯಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಈ ಮೂಲಕ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೈಜೋಡಿಸಬಹುದು.
ಸಿ-ವಿಜಿಲ್ ಸಿಟಿಜನ್ ಆಪ್ (cVIGIL Citizen Application)ನಲ್ಲಿ ದಾಖಲಾಗುವ ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.
ಸಾರ್ವಜನಿಕರು ಚುನಾವಣಾ ದೂರುಗಳ ಹೆಚ್ಚಿನ ಮಾಹಿತಿಯನ್ನು https://cvigil.eci.gov.in/ ನ ವೆಬ್‌ಸೈಟ್‌ನಲ್ಲಿ ಪಡೆದು ಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.