ಸೂರ್ಲಬ್ಬಿ ವಿದ್ಯಾರ್ಥಿ ಮೀನಾ ಹತ್ಯೆ : ರುಂಡ ದೊಂದಿಗೆ ಪರಾರಿಯಾದ ಆರೋಪಿ

ವಿಜಯ ದರ್ಪಣ ನ್ಯೂಸ್….

ಕೊಡಗನ್ನು ಬೆಚ್ಚಿ ಬೀಳಿಸಿದ ವಿದ್ಯಾರ್ಥಿ ಮೀನಾಳ ಹತ್ಯೆ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿದ್ದ ವಿದ್ಯಾರ್ಥಿ ಸೂರ್ಲಬ್ಬಿ ಮೀನಾಳನ್ನು  ಹತ್ಯೆ ಮಾಡಿದ ಆರೋಪಿ ಪ್ರಕಾಶ  ರುಂಡದ ಜೊತೆ ಪರಾರಿ ಆಗಿದ್ದಾನೆ 

ಸೂರ್ಲಬ್ಬಿ ಸರ್ಕಾರಿ ಶಾಲಾ ವಿದ್ಯಾರ್ಥಿನಿ ಮೀನಾಳಿಗೆ 16 ವರ್ಷ.ಮೀನಾ ಸೂರ್ಲಬ್ಬಿ ಸುಬ್ರಮಣಿ ಅವರ ಕಿರಿಯ ಪುತ್ರಿ.ಈಕೆಗೆ ಮೂವರು ಅಕ್ಕಂದಿರು ಮತ್ತು ಇಬ್ಬರು ಅಣ್ಣಂದಿರು ಇದ್ದರು.

ನಿನ್ನೆ ಎಸ್. ಎಸ್. ಎಲ್. ಸಿ. ಪರೀಕ್ಷೆ ಫಲಿತಾಂಶ ಬಂದಾಗ ಮೀನಾ ಉತ್ತೀರ್ಣ ಆಗಿದ್ದಳು.ಸರ್ಲಬ್ಬಿ ಶಾಲೆಯ ಹತ್ತನೇ ತರಗತಿಯಲ್ಲಿ ಈಕೆ ಏಕೈಕ ವಿದ್ಯಾರ್ಥಿನಿ.

ಆದರೆ ನಿನ್ನೆ ಈಕೆಯ ಪೋಷಕರು ಮೀನಾಳ ಮದುವೆ ನಿಶ್ಚಿತಾರ್ಥಕ್ಕೆ ಮುಂದಾಗಿದ್ದರು.16 ವರ್ಷದ ಮೀನಾ ಜೊತೆ 32 ವರ್ಷದ ಪ್ರಕಾಶ್ ನನ್ನು ಮದುವೆ ಮಾಡಲು ನಿಶ್ಚಿತಾರ್ಥ ಸಿದ್ಧತೆ ನಡೆದಿತ್ತು.

ಆದರೆ ಈ ವಿಷಯ ಮಕ್ಕಳ ಸಹಾಯವಾಣಿಗೆ ಯಾರೋ ತಿಳಿಸಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ನಿಶ್ಚಿತಾರ್ಥ ತಡೆದಿದ್ದರು. ಎರಡು ಕಡೆಯವರಿಗೆ ತಿಳುವಳಿಕೆ ನೀಡಿ 18 ವರ್ಷ ಆದ ನಂತರವೇ ಮದುವೆ ಕಾರ್ಯಕ್ರಮ ಇಟ್ಟುಕೊಳ್ಳುವಂತೆ ಸೂಚಿಸಿದ್ದರು.ಇದನ್ನು ಉಭಯ ಕಡೆಯವರು ಒಪ್ಪಿಕೊಂಡಿದ್ದರು.

ಆದ್ರೆ ಸಂಜೆ 5.30 ರ ವೇಳೆಗೆ ಪ್ರಕಾಶ್ ಮತ್ತೆ ಮೀನಾಳ ಮನೆಗೆ ತೆರಳಿ ಆಕೆಯ ತಂದೆ ಹಾಗೂ ತಾಯಿಗೆ ಹಲ್ಲೆ ಮಾಡಿದ.

ಮನೆಯಿಂದ ಮೀನಾಳನ್ನು ಸುಮಾರು 100 ಮೀಟರ್ ಹೊರಕ್ಕೆ ಎಳೆದುಕೊಂಡು ಹೋದ.

ಅಲ್ಲಿಯೇ ಮೀನಾಳ ದೇಹವನ್ನು ಕತ್ತರಿಸಿದ. ತಲೆಯನ್ನು ಕೂಡ ತುಂಡು ಮಾಡಿದ. ನಂತರ ದುಷ್ಕರ್ಮಿ ಪ್ರಕಾಶ್ ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ರಾತ್ರಿ ಎಸ್‌ ಪಿ ಮತ್ತು ಡಿ. ಎಸ್. ಪಿ ಸಹಿತ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ಪತ್ತೆಗಾಗಿ ಬಿರುಸಿನ ತನಿಖೆ ಕೈಗೊಂಡಿದ್ದಾರೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.