ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಶಾಸಕ ಧೀರಜ್ ಮುನಿರಾಜ್ ಆಗ್ರಹ

ವಿಜಯ ದರ್ಪಣ ನ್ಯೂಸ್….

ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಶಾಸಕ ಧೀರಜ್ ಮುನಿರಾಜ್ ಆಗ್ರಹ

ದೊಡ್ಡಬಳ್ಳಾಪುರ : ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಖಾಸಗಿ ಒಡೆತನದ ಪ್ಯಾಕ್ಟರಿಗಳಲ್ಲಿ ಸ್ಥಳೀಯರಿಗೆ ಮೊದಲು ಉದ್ಯೋಗ ಅವಕಾಶ ಒದಗಿಸಬೇಕೆಂದು ಶಾಸಕ ಧೀರಜ್ ಮುನಿರಾಜ್ ಆಗ್ರಹಿಸಿದರು.

ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಕಾಲೇಜುಗಳಿಂದ ಪದವಿ ಪಡೆದು ಹೊರ ಬರುವವರಿಗೆ ಖಾಸಗಿ ಕಂಪನಿಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವಂತಾಗಬೇಕು. ಅಂತಹ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕೆಂದು ಹೇಳಿದರು. ಇತ್ತೀಚಿನ ಕೃತಕ ಬುದ್ದಿಮತ್ತೆಯ ಬೆಳವಣಿಗೆಯಿಂದಾಗಿ ಯುವಕರಲ್ಲಿ ಉದ್ಯೋಗ ಅವಕಾಶಗಳು ಕಡಿಮೆಯಾಗುವ ಭೀತಿ ಕಾಡುತ್ತಿದೆ. ಹೀಗಾಗಿ ಉತ್ಪಾದಕ ಕಂಪನಿಗಳಲ್ಲಿ ಶ್ರಮವಹಿಸಿ ದುಡಿಯಲು ಯುವಕರು ಸಿದ್ಧರಿರಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಸಾದಿಕ್ ಪಾಷ ಮಾತನಾಡಿ ಯುವಕರು ಕಾರ್ಮಿಕರಾಗಿ ದುಡಿಯುವುದರಿಂದ ಶೋಷಣೆಗೋಳಗಾಗಿ, ದುಶ್ಚಟಗಳಿಗೆ ದಾಸರಾಗಿ ಅಪರಾಧ ಕೃತ್ಯಗಳನ್ನು ಎಸಗುವ ಬದಲು ಪ್ರಾಮಾಣಿಕರಾಗಿ ಉನ್ನತ ಶಿಕ್ಷಣ ಪಡೆದು ದೇಶದ ಉತ್ತಮ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕೆಂದರು.

ಹಾಸನ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಶಂಕ್ರಪ್ಪ ಎನ್. ಮಾತನಾಡಿ ಯುವಕರು ಸತ್ಪಪ್ರಜೆಗಳಾಗಿ ಬೆಳೆದು ವಿದ್ಯೆ ನೀಡಿದ ಗುರುಗಳಿಗೆ ಹಾಗೂ ಪೋಷಿಸಿ ಬೆಳೆಸಿದ ಪಾಲಕರಿಗೆ ಕೀರ್ತಿ ತರುವವರಾಗಬೇಕೆಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಸದಾಶಿವ ರಾಮಚಂದ್ರ ಗೌಡ ಅಧ್ಯಕ್ಷೀಯ ಭಾಷಣ ಮಾಡಿ, ಯುವಕರಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಯಬೇಕು. ದೇಶ ಭಕ್ತಿ, ದೇಶ ಪ್ರೇಮ ಮೈಗೂಡಿಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಶ್ರಮವಹಿಸಬೇಕೆಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಬಿ ಆರ್ ಗಂಗಾಧರಯ್ಯ ವಾರ್ಷಿಕ ವರದಿ ವಾಚಿಸಿದರು. ಹಿರಿಯ ಪ್ರಾಧ್ಯಪಕರಾದ ಪ್ರೊ. ದೊರೇನ್ ಸ್ನೇಹಲತ, ಪ್ರೊ. ಉಮೇಶ್ ವೈ, ಸತೀಶ್ ಕುಮಾರ್ ಎನ್ ಬಿ, ಶ್ರೀನಿವಾಸ್ ಜಿ, ಮತ್ತಿತರರು ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.