ಜಿಲ್ಲಾ ಮಟ್ಟದ ಮಾವು ಮತ್ತು ಹಲಸು ಮಾರಾಟ ಮೇಳ: ಸಿಇಒ ಡಾ.ಕೆ.ಎನ್ ಅನುರಾಧ
ವಿಜಯ ದರ್ಪಣ ನ್ಯೂಸ್….
ದೇವನಹಳ್ಳಿ:ಜೂ.13 ರಿಂದ 15 ವರೆಗೆ ಜಿಲ್ಲಾ ಮಟ್ಟದ ಮಾವು ಮತ್ತು ಹಲಸು ಮಾರಾಟ ಮೇಳ: ಸಿಇಒ ಡಾ.ಕೆ.ಎನ್ ಅನುರಾಧ
ರಿಯಾಯಿತಿ ದರದಲ್ಲಿ ಹಣ್ಣುಗಳ ಮಾರಾಟ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ. ಜೂನ್ 12: ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ-2025″ ಕಾರ್ಯಕ್ರಮವನ್ನು ಜೂನ್ 13 ರಿಂದ 15 ರವರೆಗೆ ದೇವನಹಳ್ಳಿ ತಾಲ್ಲೂಕಿನ ಹೋಟೆಲ್ ನಂದಿ ಉಪಚಾರ ಮುಂಭಾಗ (ನಂದಿ ಬೆಟ್ಟಕ್ಕೆ ಹೋಗುವ ರಸ್ತೆ, ರಾಣಿ ಕ್ರಾಸ್) ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ಅನುರಾಧ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾವು ಹಲಸು ಮೇಳ ಆಯೋಜನೆಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಮಾವು, ಹಲಸು ಹಾಗೂ ಇತರೆ ಹಣ್ಣುಗಳನ್ನು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ಕಲ್ಪಿಸಿಕೊಡುವ ದೃಷ್ಟಿಯಿಂದ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಸಿಗುವಂತೆ ಮಾಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ “ಮಾವು ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ-2025 ಅನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಮಾವು ಬೆಳೆಯನ್ನು 4966.79 ಹೆಕ್ಟೇರ್ ಪ್ರದೇಶದಲಿ ಬೆಳೆಯಲಾಗುತ್ತಿದ್ದು, ಪ್ರಮುಖವಾಗಿ ಬಾದಾಮಿ, ರಸಪುರಿ, ತೋತಾಪುರಿ, ಮಲಿಕಾ, ಸೇಂದೂರಾ ಮುಂತಾದ ತಳಿಗಳನ್ನು ಬೆಳೆಯಲಾಗುತ್ತಿದ್ದು ವಾರ್ಷಿಕ ಉತ್ಪಾದನೆ 20,000 ರಿಂದ 22,000 ಮೆಟ್ರಿಕ್ ಟನ್ ಗಳೆಂದು ಅಂದಾಜಿಸಲಾಗಿರುತ್ತದೆ. ಹಲಸು ಬೆಳೆಯನ್ನು 39.29 ಹೆಕ್ಟೇರ್ ಪ್ರದೇಶದಲಿ ಬೆಳೆಯುತ್ತಿದ್ದು, ವಾರ್ಷಿಕ ಉತ್ಪಾದನೆ 1500 ರಿಂದ 2000 ಮೆಟ್ರಿಕ್ ಟನ್ ನಮ್ಮ ಅಂದಾಜಿಸಲಾಗಿದೆ.
ರಾಜ್ಯದ ಮಾರುಕಟ್ಟೆಗಳಲ್ಲಿ ಬೆಲೆ ಕುಸಿದಿರುವುದು ಮಾವು ಮತ್ತು ಹಲಸು ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಈ ನಿಟ್ಟಿನಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಹಣ್ಣುಗಳ ಮೇಳ ಆಯೋಜಿಸುವ ಮೂಲಕ ಬೆಳೆಗಾರರಿಗೆ ಬೆಂಬಲ ನೀಡಿದೆ. ಸರ್ಕಾರ ನಿಗದಿ ಮಾಡಿರುವ ಬೆಲೆಯಲ್ಲಿ ಹಣ್ಣುಗಳನ್ನು ಖರೀದಿ ಮಾಡಬಹುದಾಗಿದೆ. ಬೇರೆ ಜಿಲ್ಲೆಯ ಮಾರಾಟಗಾರರು ಭಾಗವಹಿಸಸಬುದಾಗಿದ್ದು ಮಾರಟಗಾರರಿಗೆ ಮಳಿಗೆ ನೀಡಲಾಗುವುದು.
ಸಾರ್ವಜನಿಕರು ಕೂಡ ಗುಣಮಟ್ಟದ ಹಾಗೂ ತಾಜಾ ಹಣ್ಣುಗಳನ್ನು ಒಂದೇ ವೇದಿಕೆಯಲ್ಲಿ ಖರೀದಿ ಮಾಡಲು ಉತ್ತಮ ಅವಕಾಶ ಇದಾಗಿದ್ದು, ಮೇಳದ ಸದುಪಯೋಗ ಪಡೆದುಕೊಳ್ಳಲು ಸಿಇಒ ಕೋರಿದರು.
*ಸಸ್ಯ ಸಂತೆ*
ಮೇಳದಲ್ಲಿ ಸಸ್ಯ ಸಂತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಜಿಲ್ಲೆಯ ಎಲ್ಲಾ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಿಂದ ವಿವಿಧ ಜಾತಿಯ ಹಣ್ಣಿನ ಕಸಿ/ಸಸಿ ಗಿಡಗಳನ್ನು ಅಲಂಕಾರಿಕ ಗಿಡಗಳನ್ನು ಪ್ರದರ್ಶನಕ್ಕೆ ಹಾಗೂ ಇಲಾಖೆ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುವುದು.
ಸಸ್ಯ ಸಂತೆ ಯಲ್ಲಿ ಮಾವು, ಸೀಬೆ, ತೆಂಗು, ನೆರಳೆ, ಕರಿಬೇವು ಇತ್ಯಾದಿ ಸಸಿಗಳು ಹಾಗೂ ಅಲಂಕಾರಿಕ ಗಿಡಗಳನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದೆ.
ಮಾವು ಹಲಸು ಮಾರಾಟ ಮೇಳದ ಉದ್ಘಾಟನೆಯನ್ನು ಜೂನ್ 13 ರ ಬೆಳಿಗ್ಗೆ 11.00 ಗಂಟೆಗೆ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ನೇರವೇರಿಸಲಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಇಲಾಖೆ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಉಪಸ್ಥಿತರಿರುತ್ತಾರೆ.
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ ರವರು ಸಸ್ಯ ಸಂತೆ ಮೇಳವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾನ್ಯ ಸಂಸದರು, ಮಾನ್ಯ ಶಾಸಕರು ವಿಧಾನ ಸಭೆ, ಶಾಸಕರು ವಿಧಾನ ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತ ಬಾಂಧವರು ಭಾಗವಹಿಸಲಿದ್ದಾರೆ ಎಂದರು.