ವಿಜಯ ದರ್ಪಣ ನ್ಯೂಸ್…
ಜಿಲ್ಲೆಗೆ ಮಂತ್ರಿಸ್ಥಾನ ಸಿಗದಿರುವುದು ಅಭಿವೃದ್ದಿಗೆ ಹಿನ್ನಡೆಯಾಗಲಿದೆ : ಪೂಲಕುಂಟಹಳ್ಳಿ ರಘುನಾಥರೆಡ್ಡಿ

ಶಿಡ್ಲಘಟ್ಟ : ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಸಚಿವ ಸ್ಥಾನವನ್ನು ನೀಡದಿರುವುದರಿಂದ ಉಭಯ ಜಿಲ್ಲೆಗಳ ಅಭಿವೃದ್ದಿಗೆ ಹಿನ್ನಡೆ ಆಗುವಂತಾಗಿದೆ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದೆ ಪ್ರಾದೇಶಿಕ ತಾರತಮ್ಯ ಮಾಡಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪೂಲಕುಂಟಹಳ್ಳಿ ರಘುನಾಥರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇದೆ ಮೊದಲ ಬಾರಿಗೆ ಅಖಂಡ ಕೋಲಾರ ಜಿಲ್ಲೆಗಳಿಗೆ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗದಂತಾಗಿದೆ ,ಇದರಿಂದಾಗಿ ಇದು ನೇರವಾಗಿ ಎರಡೂ ಜಿಲ್ಲೆಗಳ ಅಭಿವೃದ್ದಿ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಸದಾ ಬರಗಾಲಕ್ಕೆ ತುತ್ತಾಗಲಿದ್ದು ಮಂತ್ರಿ ಸ್ಥಾನ ದೊರಕದೆ ಇರುವುದರಿಂದ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ, ಈಗಾಗಲೆ ಅನುಷ್ಠಾನ ಹಂತದಲ್ಲಿರುವ ನೀರಾವರಿ ಯೋಜನೆಗಳೂ ವಿಳಂಭವಾಗುವ ಸಂಭವ ಹೆಚ್ಚು ಎಂದರು.
ಬೇರೆ ಜಿಲ್ಲೆಗಳ ಮಂತ್ರಿಗಳನ್ನು ಈ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದರೆ ಅವರು ಸ್ವಾತಂತ್ರ್ಯ ದಿನದಂದು ಧ್ವಜಾರೋಹಣೆ ಮಾಡುವುದಕ್ಕೆ, ವಾಡಿಕೆ ಸಭೆಗಳನ್ನು ನಡೆಸುವುದಕ್ಕೆ ಸೀಮಿತವಾಗಿ ಬಿಡುತ್ತಾರೆ. ಅವರು ಅಧಿಕಾರಿಗಳಿಗೆ, ಜನ ಸಾಮಾನ್ಯರಿಗೆ ಸಿಗುವುದು ಕಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ರೇಷ್ಮೆ, ಹಾಲು, ಮಾವು ಬೆಳೆಗಳಿಗೆ ಜಗತ್ಪ್ರಸಿದ್ದಿಯಾಗಿದ್ದು ಹೈನು, ರೇಷ್ಮೆ, ಮಾವು ಕ್ಷೇತ್ರಗಳು ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದು ಇವೆಲ್ಲವಕ್ಕೂ ಪರಿಹಾರ ದೊರೆಯಲು, ನೀರಾವರಿ ಸಮಸ್ಯೆ ಬಗೆಹರಿಯಲು ಸ್ಥಳೀಯರಿಗೆ ಮಂತ್ರಿ ಪದವಿ ಸಿಗಬೇಕು ಎಂದು ಆಗ್ರಹಿಸಿದರು.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿದ್ದು ಜಿಲ್ಲೆಯಲ್ಲಿ ಮೂರು ಭಾರಿ ಗೆದ್ದ ಶಾಸಕರೂ ಇದ್ದಾರೆ, ಕಿರಿಯ ಶಾಸಕರೂ ಇದ್ದಾರೆ ,ಅದರಲ್ಲೂ ಒಕ್ಕಲಿಗ ಶಾಸಕರೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಎರಡೂ ಜಿಲ್ಲೆಗಳಿಗೆ ತಲಾ ಒಬ್ಬೊಬ್ಬರು ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು, ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.








