ಬದುಕೊಂದು ಕವಿತೆ, ಬದುಕಿನ ಕವಿತೆ………

ವಿಜಯ ದರ್ಪಣ ನ್ಯೂಸ್…

ಬದುಕೊಂದು ಕವಿತೆ,
ಬದುಕಿನ ಕವಿತೆ………

ಬರುವವರಿಗೆ ಸ್ವಾಗತ,
ಹೋಗುವವರಿಗೆ ವಂದನೆಗಳು,

ಮೆಚ್ಚುವವರಿಗೆ ಧನ್ಯವಾದಗಳು,
ಟೀಕಿಸುವವರಿಗೆ ನಮಸ್ಕಾರಗಳು,

ಅಭಿಮಾನಿಸುವವರಿಗೆ ಕೃತಜ್ಞತೆಗಳು,
ಅಸೂಯೆಪಡುವವರಿಗೆ ಸಹಾನುಭೂತಿಗಳು,

ಪ್ರೀತಿಸುವವರಿಗೆ ನಗು,
ದ್ವೇಷಿಸುವವರಿಗೆ ನಿರ್ಲಕ್ಷ್ಯ,

ಸಹಾಯ ಮಾಡುವವರಿಗೆ ಸಲಾಂ,
ತೊಂದರೆ ಕೊಡುವವರಿಗೆ ಗುಡ್ ಬೈ,

ಆತ್ಮೀಯರಿಗೊಂದಷ್ಟು ಅಪ್ಪುಗೆ,
ಪರಿಚಿತರಿಗೊಂದಷ್ಟು ಸಲುಗೆ,

ಪ್ರೋತ್ಸಾಹಿಸುವವರಿಗೆ ನಮನಗಳು,
ಕಾಲೆಳೆಯುವವರಿಗೆ ತಿರಸ್ಕಾರಗಳು,

ಜೊತೆಯಾಗುವವರಿಗೆ
ಯಶಸ್ಸಾಗಲಿ,
ದೂರಾಗುವವರಿಗೆ ಒಳ್ಳೆಯದಾಗಲಿ,

ಗೆದ್ದವರಿಗೆ ಅಭಿನಂದನೆಗಳು,
ಸೋತವರಿಗೆ ಹಿತ ನುಡಿಗಳು,

ಆಳವಾಗಿ ಪ್ರೀತಿಸುವವರು ಒಂದಷ್ಟು ಜನ,
ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ,

ಮೆಚ್ಚುವವರಿಗೆ ಬರವಿಲ್ಲ,
ಟೀಕಿಸುವವರು ಕಡಿಮೆಯೇನಿಲ್ಲ,

ಅಸೂಯೆ ಒಳಗೊಳಗೆ,
ಕುಹುಕ ಮೇಲಿನ ಹೊದಿಕೆ,

ಎತ್ತಿ ಕಟ್ಟುವವರು ಹಲವರು,
ಎಚ್ಚರಿಸುವವರು ಕೆಲವರು,

ಹೃದಯ ತಟ್ಟುವವರು ಇದ್ದಾರೆ,
ಬೆನ್ನಿಗೆ ಇರಿಯುವವರೂ ಉಂಟು,

ಧೈರ್ಯ ತುಂಬುವವರು,
ಭಯಪಡಿಸುವವರು,
ಜೊತೆಯಾಗುವವರು,
ದೂರ ಸರಿಯುವವರು,
ಸ್ವಾಗತಿಸುವವರು,
ವಿರೋಧಿಸುವವರು,

ತಪ್ಪು ಅರ್ಥೈಸಿಕೊಂಡವರು,
ನಿಜದ ಅನುಭಾವಿಗಳು,
ಪೂರ್ವಾಗ್ರಹ ಪೀಡಿತರು,
ವಿಶಾಲ ದೃಷ್ಟಿಯವರು,
ಮಜಾ ತೆಗೆದುಕೊಳ್ಳುವವರು,
ಹಿತ ಬಯಸುವವರು,

ನಿರ್ಲಿಪ್ತರು – ನಿರ್ಲಕ್ಷ್ಯವಹಿಸುವವರು,
ಹಿಂಸಾವಾದಿಗಳು ಕರುಣಾಮಯಿಗಳು,
ಮೇಲೆತ್ತುವವರು,
ಕೆಳಗೆ ತುಳಿಯುವವರು,
ಸ್ವಾಭಿಮಾನಗಳು,
ಮಾರಿಕೊಂಡವರು,

ಮುಖವಾಡ ಧರಿಸಿರುವವರು,
ಸಹಜ ಸ್ವಭಾವದವರು,
ಆಕ್ರೋಶ ನುಡಿಯ ಮಾತುಗಳು
ಮೆಲು ಧ್ವನಿಯ ವಿನಯಿಗಳು,
ನಗುನಗುತ್ತಾ ಅಳಿಸುವವರು,
ಅಳುವಿನಲ್ಲಿ ನಗುತ್ತಾ ಜೊತೆಯಾಗುವವರು,

ನಿಜ ವೀರರು,
ರಣ ಹೇಡಿಗಳು,
ಬಹುಮಾನಿಸುವವರು,
ಅವಮಾನಿಸುವವರು,
ಪ್ರೇರೇಪಿಸುವವರು,
ಪ್ರಚೋದಿಸುವವರು,
ತ್ಯಾಗಿಗಳು – ಸ್ವಾರ್ಥಿಗಳು,
ಜಾಣ ಪೆದ್ದರು – ಪೆದ್ದ ಜಾಣರು,

ನವ ರಸಗಳು,
64 ವಿದ್ಯೆಗಳು,
ಊಹೆಗೂ ನಿಲುಕದ ಮನಸುಗಳು……

18 ರ ಕನಸುಗಳು,
30 ರ ಆಸೆಗಳು,
50 ರ ಭರವಸೆಗಳು,
70 ರ ನೋವುಗಳು,
ಸಾಮಾಜಿಕ ಜಾಲತಾಣಗಳ ಅಭಿಪ್ರಾಯಗಳು,

ಯೇಸುವನ್ನೇ ಶಿಲುಬೆಗೇರಿಸಿದರು,
ಬಸವಣ್ಣನನ್ನೇ ಕೊಂದರು,
ಅಬ್ರಹಾಂ ಲಿಂಕನ್ನನ್ನನ್ನೇ ಇಲ್ಲವಾಗಿಸಿದರು,
ಪೈಗಂಬರರನ್ನೇ ಓಡಿಸಿದರು,
ಅಂಬೇಡ್ಕರ್ ರನ್ನೇ ಅವಮಾನಿಸಿದರು,
ಗಾಂಧಿಗೇ ಗುಂಡಿಕ್ಕಿದರು,

ನಮ್ಮ ತನವೂ ಇರಬೇಕು,
ಹೊಂದಾಣಿಕೆಯೂ ಆಗಬೇಕು,
ಸಹಕಾರವೂ ಸಿಗಬೇಕು…..
ವೈವಿಧ್ಯತೆಯೂ ಬೆರೆಯಬೇಕು,
ಅತಿರೇಕಗಳ ನಡುವೆ ಸಮನ್ವಯ.. ‌…

ಈ ಎಲ್ಲದರ ನಡುವೆ ‌ವಾಸ್ತವದ ಬದುಕು,
ವ್ಯಾವಹಾರಿಕ ಬದುಕು, ನೆಮ್ಮದಿಯ ಜೀವನದ ಹುಡುಕಾಟ…….

ವಯಸ್ಸಿನ ಅಂತರ,
ಹಣಕಾಸಿನ ವ್ಯತ್ಯಾಸ,
ಜಾತಿಯ ಕಂದರ,
ವಿದ್ಯೆಯ ಭಿನ್ನತೆ,
ಅಧಿಕಾರದ ಅಸಮಾನತೆ,

ಬದುಕನ್ನು ಬಯಸುವವರಿಗೆ,
ಹೆದರಿಕೆ, ನಾಚಿಕೆ, ಅವಮಾನ,
ಆಸೆ,

ಸಾವನ್ನು ಸ್ವಾಗತಿಸುವವರಿಗೆ…….

ಹೀಗೆ ಬದುಕೊಂದು ಊಹೆಗೆ ನಿಲುಕದ ಅನಂತದೆಡೆಗೆ ಪಯಣ…….

ಹೀಗೆ,
ಎಲ್ಲಾ ಭಾವನೆಗಳೊಂದಿಗೆ, ಸಾಗುತ್ತಲೇ ಇದೆ ಬದುಕು,

ನನ್ನದು, ನಿಮ್ಮದು, ಎಲ್ಲರದೂ,

ಬದುಕಿನೊಂದಿಗೆ ಸರಸವಾಡುತ್ತಾ,
ವಿಧಿಯೊಂದಿಗೆ ಚೆಲ್ಲಾಟವಾಡುತ್ತಾ,
ಬರುವುದನ್ನು ಸ್ವೀಕರಿಸುತ್ತಾ,
ಹೋಗುವುದನ್ನು ಬೀಳ್ಕೊಡುತ್ತಾ,
ನಗುತ್ತಾ, ಅಳುತ್ತಾ,….‌…‌‌‌

ಸಾಗುತ್ತಲೇ ಇರಲಿ ಜೀವನ…..

ಕೊನೆಯೇ ಇಲ್ಲವೇನೋ ಎಂಬ ಭಾವದೊಂದಿಗೆ..‌‌‌…………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……