ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಟಗಳು ನಡೆಯಲು ರೈತ ಸಂಘಟನೆಗಳು ಒಗ್ಗೂಡಬೇಕು :ಸಿ.ವಿ.ಲೋಕೇಶ್ ಗೌಡ 

ವಿಜಯ ದರ್ಪಣ ನ್ಯೂಸ್……

ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಟಗಳು ನಡೆಯಲು ರೈತ ಸಂಘಟನೆಗಳು ಒಗ್ಗೂಡಬೇಕು :ಸಿ.ವಿ.ಲೋಕೇಶ್ ಗೌಡ

ಶಿಡ್ಲಘಟ್ಟ : ರೈತರನ್ನು ಸಂಘಟಿಸುವುದು ಮತ್ತು ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಟಗಳನ್ನು ಸಂಯೋಜಿಸುವುದು, ರೈತರ ಸಮಸ್ಯೆಗಳು, ಕೃಷಿ ನೀತಿಗಳು ಮತ್ತು ಬೆಳೆ ಬೆಲೆಗಳ ಕುರಿತಾದ ಹೋರಾಟಗಳು ನಿರಂತರವಾಗಿ ನಡೆಯಲು ರೈತ ಸಂಘಟನೆಗಳು ಒಗ್ಗೂಡಬೇಕಾದ ಅವಶ್ಯಕತೆಯಿದೆ
: ಸಿ.ವಿ.ಲೋಕೇಶ್ ಗೌಡ ತಿಳಿಸಿದರು.

ನಗರದಲ್ಲಿ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಶಿಡ್ಲಘಟ್ಟ ಕ್ಷೇತ್ರದ ರಾಜಕೀಯ ಅಸಂಗತತೆಗಳ ಬಗ್ಗೆ ಅತ್ತ ಕಾಂಗ್ರೆಸ್ ನಲ್ಲಿಯೂ ಯಾರೂ ಮಾತನಾಡುತ್ತಿಲ್ಲ, ಇತ್ತ ಬಿ.ಜೆ.ಪಿ ಪಕ್ಷದವರೂ ಉಸಿರೆತ್ತುತ್ತಿಲ್ಲ. ಸ್ಥಳೀಯ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ದುಡುಕಿ ಮಾತನಾಡಿ, ಅದಕ್ಕಾಗಿ ಜೈಲನ್ನೂ ಕಂಡರು, ಕ್ಷಮಾಪಣೆಯನ್ನೂ ಕೇಳಿದರು. ಇದು ಮುಗಿದ ಅಧ್ಯಾಯ, ಈಗಲೂ ಅವರು ಮಾತನಾಡುವಾಗ, ನನ್ನ ವಿರುದ್ಧ ಷಡ್ಯಂತ್ರ, ಪಿತೂರಿ ಮಾಡಿ ಜೈಲಿಗೆ ಕಳುಹಿಸಿದರು ಎಂದು ಹಲುಬುವುದು ಸರಿಯಲ್ಲ ಎಂದು ಹೇಳಿದರು.

ಹಳೆಯದನ್ನು ಮರೆತು ಸಮಾಜಸೇವೆ ಅಥವಾ ಪಕ್ಷ ಸಂಘಟನೆ ಮಾಡಲಿ ,ಸಾದಲಮ್ಮ ದೇವಸ್ಥಾನದ ಬಳಿ ಮಾಡಿದ್ದು ಪ್ರಸಾದ ವಿನಿಮಯ ಅಥವಾ ಸೇವೆಯಲ್ಲ. ಪ್ರಚಾರಕ್ಕಾಗಿ ನಡೆಸಿದ ಬಾಡೂಟವಷ್ಟೇ, ವಿ.ಮುನಿಯಪ್ಪನವರ ಸಾಮ್ರಾಜ್ಯ ರಾಜೀವ್ ಗೌಡರಿಗೆ ಹಸ್ತಾಂತರವಾಗುವಾಗ ಅವರಿಬ್ಬರ ನಡುವೆ ಇದ್ದ ಫಲಾನುಭವಿಗಳು ಮಾತ್ರ ಈಗ ಅವರ ಹಿಂದೆ ಇದ್ದಾರೆ , ನಿಜಕ್ಕೂ ಜನಸೇವೆಯೆಂದರೆ, ಅವರದ್ದೇ ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದು ಎಂದರು.

ಎಲ್ಲಾ ರಾಜಕೀಯ ಪಕ್ಷಗಳು ಅವರವರ ಕಾರ್ಯಗಳಲ್ಲಿ ನಿರತರಾಗಿದ್ದಾರೆ ರೈತರ ಸಂಕಷ್ಟಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತಿರುವುದು ರೈತ ಸಂಘಟನೆಗಳು ಮಾತ್ರ ಹಾಗಾಗಿ ರೈತ ಸಂಘಟನೆಯನ್ನು ಬಲಿಷ್ಠಗೊಳಿಸಲು ಹಳ್ಳಿಹಳ್ಳಿಗೂ ಪ್ರವಾಸ ಕೈಗೊಳ್ಳಲಾಗುವುದು ವಿವಿಧ ರೈತ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ರೈತರನ್ನು ರೈತರೇ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ ರೈತರ ನೆರವಿಗೆ ರಾಜಕೀಯ ನಾಯಕರು ಬರುವುದಿಲ್ಲ , ಶಿಡ್ಲಘಟ್ಟದಲ್ಲಿ ಬಿ.ಜೆ.ಪಿ .ಪಕ್ಷದ ಮುಖಂಡರು ಕೌಟುಂಬಿಕ ಕಾರ್ಯಕ್ರಮಗಳು ಮತ್ತು ಪಕ್ಷ ಸೂಚಿಸುವ ಕಾರ್ಯಕ್ರಮಗಳನ್ನು ಮಾತ್ರ ಮಾಡುತ್ತಿದ್ದಾರೆ ,ಸ್ಥಳೀಯ ರಾಜಕಾರಣದ ಬಗ್ಗೆ ಮಾತನಾಡಲು ಕೋಲಾರದಿಂದ ಮಾಜಿ ಸಂಸದ ಮುನಿಶಾಮಿ ಬರಬೇಕು.

ಹೋರಾಟ, ಸಂಘಟನೆ, ಜನರಧ್ವನಿಯಾಗಿ ಕೆಲಸ ಮಾಡಿ, ವಿರೋಧಪಕ್ಷದವರ ಮುಖವಾಡ ಕಳಚಿದಾಗ ಮಾತ್ರ, ಜನರಿಗೆ ಒಳಿತಾಗುತ್ತದೆ ಮತ್ತು ಪಕ್ಷ ಸಂಘಟನೆ ಆಗುತ್ತದೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ, ಗುಡಿಹಳ್ಳಿ ವೆಂಕಟಸ್ವಾಮಿ,ಬಶೆಟ್ಟಿಹಳ್ಳಿ ಅರುಣ್, ಗೌಡನಹಳ್ಳಿ ರಘು ಹಾಜರಿದ್ದರು.