ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳು

ವಿಜಯ ದರ್ಣಣ ನ್ಯೂಸ್ 
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 31 

‌‌‌‌‌‌‌‌‌‌ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಜಿಲ್ಲೆಯ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ವಿವಿಧ ಯೋಜನೆಗಳಡಿ ಸೌಲಭ್ಯ ಒದಗಿಸಲಾಗುತ್ತಿದೆ.
ಇಲಾಖಾ ಯೋಜನೆಗಳಾದ ಯಂತ್ರಚಾಲಿತ ಮೋಟಾರು ವಾಹನ, ಶ್ರವಣ ದೋಷವುಳ್ಳ ವಿಕಲಚೇತನರಿಗೆ ಹೊಲಿಗೆ ಯಂತ್ರ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ವಿಕಲಚೇತನರಿಗೆ ಪ್ರೋತ್ಸಾಹಧನ, ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ, ಸಾಧನ ಸಲಕರಣೆ ವಿತರಣೆ, ಸ್ವಯಂ ಉದ್ಯೋಗಕ್ಕೆ “ಆಧಾರ” ಯೋಜನೆ, ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಅಂಧ ವಿದ್ಯಾರ್ಥಿಗಳಿಗೆ ಉಚಿತ ಟಾಕಿಂಗ್ ಲ್ಯಾಪ್ ಟಾಪ್ ಹಾಗೂ ಬ್ರೆಲ್ ಕಿಟ್, ಅಂಧ ಮಹಿಳೆಯರ ಮಕ್ಕಳ ಶಿಶು ಪಾಲನೆಗಾಗಿ ಭತ್ಯೆ, ವಿಕಲಚೇತನರನ್ನು ಸಾಮಾನ್ಯರು ವಿವಾಹವಾದಲ್ಲಿ ವಿವಾಹ ಪ್ರೋತ್ಸಾಹಧನ ಹಾಗೂ ಇಲಾಖೆಯ ಅನುದಾನದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಟಾನಗೊಳಿಸುತ್ತಿರುವ ಹಾಗೂ ಇತರೆ ಎಲ್ಲಾ ಆನ್-ಲೈನ್ ಮತ್ತು ಆಫ್-ಲೈನ್ ಯೋಜನೆಗಳು ಸಂಪೂರ್ಣವಾಗಿ ಉಚಿತವಾಗಿದ್ದು, ಇಲಾಖೆಯಿಂದ ಯಾವುದೇ ರೀತಿಯ ಶುಲ್ಕವನ್ನು ನಿಗಧಿ ಪಡಿಸಿರುವುದಿಲ್ಲ.
ಆದ್ದರಿಂದ ಮದ್ಯವರ್ತಿಗಳ ಸಂಪರ್ಕವಿಲ್ಲದೆ ನೇರವಾಗಿ ನಿಮ್ಮ ಗ್ರಾಮ, ನಗರ, ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುವ ಗ್ರಾಮೀಣ, ನಗರ ಹಾಗೂ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಉಚಿತವಾಗಿ ಇಲಾಖಾ ಸೌಲಭ್ಯಗಳ ಮಾಹಿತಿ ಹಾಗೂ ಅನುಕೂಲಗಳನ್ನು ಪಡೆಯಬಹುದಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಲಾಖಾ ಯೋಜನೆಗಳಿಗಾಗಿ ಯಾವುದೇ ಮಧ್ಯವರ್ತಿಗಳು ವಿಕಲಚೇತನರನ್ನ ಹಣ ಕೇಳಿದ್ದಲ್ಲಿ ಲೋಕಾಯುಕ್ತರಿಗೆ ನೇರವಾಗಿ ದೂರು ನೀಡಬಹುದು ಹಾಗೂ ಪತ್ರದ ಮೂಲಕ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ವಿಳಾಸಕ್ಕೆ ಸಂಪರ್ಕಿಸಬಹುದು.
ಇಲಾಖಾ ಸೌಲಭ್ಯಗಳ ಹೆಚ್ಚಿನ ಮಾಹಿತಿಗಾಗಿ:
ವಿಕಲಚೇತನರ ಮಾಹಿತಿ ಸಲಹಾ ಕೇಂದ್ರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 03, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು ದೂರವಾಣಿ ಸಂಖ್ಯೆ: 080-29787441 ಅನ್ನು ಸಂಪರ್ಕಿಸಬಹುದಾಗಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಎನ್.ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.