ವಿಜಯ ದರ್ಪಣ ನ್ಯೂಸ್…..
ತಂದೆ, ತಾಯಿ, ಗುರು, ಸ್ನೇಹಿತರ ಆಶೀರ್ವಾದ ಸಾಧನೆಗೆ ದಾರಿ : ಕವಿ, ಗಾಯಕ ವೀರೇಶ್ ಯರಬಾಳು ಅಭಿಪ್ರಾಯ
ಬೆಂಗಳೂರು : ಇವತ್ತಿನ ದಿನಗಳಲ್ಲಿ ಯಾರೇ ಆಗಲಿ ಗುರುಗಳು, ಸ್ನೇಹಿತರು, ತಂದೆ ತಾಯಿಯರ ಆಶೀರ್ವಾದ, ಹಾರೈಕೆಗಳು ಇಲ್ಲದಿದ್ದರೆ ಮುಂದೆ ಸಾಧನೆ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಕವಿ,ಪತ್ರಕರ್ತ, ಗಾಯಕರೂ ಆದ ಶ್ರೀ ವೀರೇಶ್ ಯರಬಾಳು ಅಭಿಪ್ರಾಯ ಪಟ್ಟರು .

ಅವರು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಂಗೀತ ಸಂಭ್ರಮ ಸಮಾರಂಭದಲ್ಲಿ ತಮಗೆ 50 ವರ್ಷದ ಸುವರ್ಣ ಸಂಭ್ರಮದಲ್ಲಿ *ಕಾಯಕ ಜೀವಿ* ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ನಾವು ಯಾವುದೇ ಸಾಧನೆ ಮಾಡಲು ಗಾಡ್ ಫಾದರ್ ಗಳು ಇರದಿದ್ದರೆ ನಾವು ಮುಂದೆ ಬರಲು ಸಾಧ್ಯವಾಗುವುದಿಲ್ಲ, ಅದಕ್ಕಾಗಿ ನಾವು ಪ್ರಾಮಾಣಿಕವಾಗಿ ನಮ್ಮ ಕೆಲಸಗಳಲ್ಲಿ ನಾವು ದೇವರನ್ನು ಕಾಣಬೇಕು, ಪ್ರಶಸ್ತಿ, ಗೌರವಗಳಿಗೆ ಯಾವತ್ತೂ ಅರ್ಜಿ ಹಾಕಿ, ದುಡ್ಡು ಕೊಟ್ಟು ಪ್ರಶಸ್ತಿ ಪಡೆದು ಮೆರೆಯಲು ಹೋಗಬಾರದು.
ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಅವರ ಹಾದಿಯನ್ನು ನಾವು ಒಂದಿಷ್ಟಾದರೂ ತುಳಿಯಬೇಕು ಆವಾಗ ಮಾತ್ರ ನಾವು ಈ ಭೂಮಿಯ ಮೇಲೆ ಇದ್ದುದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ಪ್ರಶಸ್ತಿ ನೀಡಿ ಗೌರವಿಸಿದ ಸಂಸ್ಥೆಗೆ, ಪ್ರೊ.ಹಂಪನಾ, ಜಯಶ್ರೀ ಅರವಿಂದ್ , ಡಾ.ಸಿಸಿರಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
80 ವರ್ಷದ ಅಭಿನಂದನೆ ಮತ್ತು ಕಾಯಕಜೀವಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ, ಕೃಷಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಶ್ರೀ ಎಂ.ವಿ.ಶಿವಪ್ರಸಾದ್ ಅವರು ಇಂದು ಪ್ರಶಸ್ತಿಗಳ ಗುಣಮಟ್ಟ ಹೇಗಾಗಿದೆ ಎಂದರೆ
ಪಡೆದುಕೊಳ್ಳುವವರು, ಹೊಡೆದುಕೊಳ್ಳುವವರು ಹೆಚ್ಚಾಗಿದ್ದು, ಪ್ರಶಸ್ತಿಗಳ ಮೌಲ್ಯವೇ ಹೊರಟು ಹೋಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸರ್ಕಾರದ ಮತ್ತು ಪ್ರತಿಷ್ಠಿತ ಸಂಘಸಂಸ್ಥೆಗಳು ಕೊಡಮಾಡುವ ಪ್ರಶಸ್ತಿ, ಮಾನ ಸನ್ಮಾನಗಳು ಜಾತಿ,ಹಣ, ಶಿಫಾರಸು, ಯಾರದಾದರೂ ಮರ್ಜಿ ಇಲ್ಲದೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಶಸ್ತಿಗಳು ದೊರೆಯಲಾರವು ಎಂದರು.

ಎಷ್ಟೋ ಪ್ರಶಸ್ತಿಗಳು ಮುಂಗಡವಾಗಿ ಹಣ ಪಾವತಿ ಮಾಡಿಸಿಕೊಂಡೇ ಅನಧಿಕೃತವಾಗಿ ಮಾರಾಟವಾಗುತ್ತಿವೆ, ಜಾತಿಗೆ ಸೇರಿದವರು, ರಾಜಕೀಯ ಪಕ್ಷಗಳಿಗಳ ರಾಜಕಾರಣಿಗಳ ಹಿಂದೆ ಮುಂದೆ ಓಡಾಡಿದವರ ಪಾಲಾಗುತ್ತಿರುವುದು ನೋವಿನ ಸಂಗತಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಕುಂಚ ಕಲಾವಿದೆ, ಕಥೆಗಾರ್ತಿ ಶಾಂತಿ ವಾಸು ಅವರು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ದಾನಿಗಳಿಂದ ಕೆಲವು ದತ್ತಿ ಸ್ಥಾಪನೆ ಮಾಡಿ ಅದರಿಂದ ಬರುವ ಬಡ್ಡಿ ಹಣದಿಂದ ತಾವೇ ಗೌರವ ಧನ ನೀಡಿ, ತುಂಬಾ ಚೆನ್ನಾಗಿ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ , ಹಾಗೂ ಇಂತಹಾ ಸೇವೆಯನ್ನು ಮೆಚ್ಚಲೇಬೇಕು ಎಂದರು.












