ವಿಜಯ ದರ್ಪಣ ನ್ಯೂಸ್….
ನಮ್ಮ ಪೂರ್ವಿಕರು ನಿರ್ಮಿಸಿದ ಕೆರೆ, ಕಲ್ಯಾಣಿಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೀರಿನ ಬವಣೆ ತಪ್ಪಿಸಿ

ಶಿಡ್ಲಘಟ್ಟ : ಕಲ್ಯಾಣಿಗಳನ್ನು ಸ್ವಚ್ಛಗೊಳಿಸುವುದರಿಂದ ಅವುಗಳ ಪುರಾತನ ವೈಭವವನ್ನು ಮರಳಿ ಪಡೆಯಲು ಸಾಧ್ಯ ಎಂದು ತಾಲ್ಲೂಕು ಪಂಚಾಯಿತಿ ಇಒ ಆರ್. ಹೇಮಾವತಿ ತಿಳಿಸಿದರು.
ತಾಲ್ಲೂಕಿನ ತಲಕಾಯಲಾಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ವೆಂಕಟಾಪುರ ಗ್ರಾಮದ ಶ್ರೀಭೂನೀಳಾ ಸಮೇತ ವೆಂಕಟರಮಣಸ್ವಾಮಿ ದೇವಸ್ಥಾನದ ಕಲ್ಯಾಣಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಿಕರು ನಿರ್ಮಿಸಿರುವ ಕೆರೆ ,ಕಲ್ಯಾಣಿಗಳನ್ನು ಉಳಿಸಿಕೊಂಡರೆ ಮಾತ್ರ ಮುಂದಿನ ಪೀಳಿಗೆಗೆ ನೀರಿನ ತೊಂದರೆ ತಪ್ಪುತ್ತದೆ ಹಾಗು ದೇವಸ್ಥಾನಗಳ ಕಲ್ಯಾಣಿ ಅಥವಾ ಕೊಳಗಳು ಧನಾತ್ಮಕ ಶಕ್ತಿಯ ಕೇಂದ್ರಗಳು ಹಿಂದೆ ಇವೇ ನೀರಿನ ಮುಖ್ಯ ಮೂಲಗಳಾಗಿದ್ದವು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಲೇವಾರಿ ಕುರಿತು ಜಾಗೃತಿ ಮೂಡಿಸುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದೆ ಪಂಚಾಯಿತಿಯ ಕಸ ಸಂಗ್ರಹಣಾ ವಾಹನಗಳಿಗೆ ನೀಡುವ ಮೂಲಕ ಪರಿಸರ ಕಾಪಾಡಲು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಪಿಡಿಓ ಶ್ರೀನಿವಾಸಪ್ಪ, ಎಫ್.ಇ.ಎಸ್ ಸಂಸ್ಥೆಯ ಸಂಯೋಜಕರು ಹಾಗೂ ಗ್ರಾಮಸ್ಥರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.









