ವಿಜಯ ದರ್ಪಣ ನ್ಯೂಸ್.,..
ಸಹಕಾರ ಸಂಘದಿಂದ ರೈತ ಸದಸ್ಯರಿಗೆ ಸಾಲ ಸೌಲಭ್ಯದ ಚೆಕ್ ವಿತರಣೆ

ಕೆ.ಆರ್.ನಗರ: ರೈತಬಾಂಧವರಿಗೆ ಅನುಕೂಲ ಮಾಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಸಹಕಾರ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡುತ್ತಿದ್ದು ರೈತರು ಇದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.
ತಾಲ್ಲೂಕಿನ ಬ್ಯಾಡರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಹೊಸ ರೈತ ಸದಸ್ಯರಿಗೆ ನೀಡಲಾದ ಸಾಲ ಸೌಲಭ್ಯದ ಚೆಕ್ ವಿತರಿಸಿ ಮಾತನಾಡಿದ ಅವರು ಸಂಘಗಳ ವತಿಯಿಂದ ನೀಡುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಮತ್ತೆ ಪಡೆಯಬೇಕು ಎಂದರು.
ಬ್ಯಾಡರಹಳ್ಳಿ ಸಂಘದ ವತಿಯಿಂದ 61 ಮಂದಿ ಹೊಸ ಸದಸ್ಯರಿಗೆ 56ಲಕ್ಷದ 20ಸಾವಿರ ರೂ.ಗಳ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದಲ್ಲದೆ ಒಟ್ಟು 9ಕೋಟಿ 41 ಲಕ್ಷ ರೂ.ಗಳ ಸಾಲವನ್ನು ರೈತ ಸದಸ್ಯರಿಗೆ ವಿತರಿಸಲಾಗಿದ್ದು ಎಲ್ಲರೂ ಸಕಾಲದಲ್ಲಿ ಮರುಪಾವತಿ ಮಾಡಬೇಕೆಂದು ಅಧ್ಯಕ್ಷರು ಮನವಿ ಮಾಡಿದರು.
ಮಹಿಳಾ ಸ್ವ-ಸಹಾಯ ಸಂಘಗಳಿಗೆ 1ಕೋಟಿ45ಲಕ್ಷ ರೂ.ಸಾಲ ನೀಡಲಾಗಿದ್ದು ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ಮರುಪಾವತಿ ಮಾಡುವ ರೀತಿಯಲ್ಲಿ ಸರ್ಕಾರ ಅಧೀನದ ಸಂಘಕ್ಕೂ ಮರುಪಾವತಿ ಮಾಡಬೇಕೆಂದು ಕೋರಿದ ಅಧ್ಯಕ್ಷ ದೊಡ್ಡಸ್ವಾಮೇಗೌಡ ನಮ್ಮ ಸಂಘಗಳ ಮೂಲಕ ನೀಡುವ ಸಾಲ ಇತರ ಸಂಘ ಸಂಸ್ಥೆಗಳ ಬಡ್ಡಿದರಕ್ಕಿಂತ ಬಹಳ ಕಡಿಮೆ ಇರಲಿದೆ ಎಂದು ಕಿವಿಮಾತು ಹೇಳಿದರು.
ಬ್ಯಾಡರಹಳ್ಳಿ ಸಂಘದಲ್ಲಿ 2650 ಮಂದಿ ಸದಸ್ಯರಿದ್ದು ಇನ್ನಷ್ಟು ರೈತರನ್ನು ಸದಸ್ಯರನ್ನಾಗಿ ಮಾಡಬೇಕೆಂದು ಸಂಘದ ಸಿಇಓ ಸಚಿನ್ ಕುಮಾರ್ಗೆ ಸೂಚಿಸಿದ ಅಧ್ಯಕ್ಷರು ಸಂಘದ ಆಡಳಿತ ಕಛೇರಿ ನಿರ್ಮಾಣ ಮಾಡಲು ಅಪೆಕ್ಸ್ ಬ್ಯಾಂಕ್ ವತಿಯಿಂದ 1 ರೂ. ಬಡ್ಡಿದರದಲ್ಲಿ ಸಾಲ ನೀಡಲಿದ್ದು ಇದನ್ನು ಬಳಕೆ ಮಾಡಿಕೊಂಡು ನೂತನ ಆಡಳಿತ ಕಛೇರಿ ನಿರ್ಮಾಣ ಮಾಡಲು ಆಡಳಿತ ಮಂಡಳಿಯವರು ಸನ್ನದ್ಧರಾಗಬೇಕೆಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಬಿ.ಎಲ್.ಪ್ರಾಣೇಶ್, ಉದಯಕುಮಾರ್, ಉಪಾಧ್ಯಕ್ಷ ನಿರ್ದೇಶಕರಾದ ರಮೇಶ್, ಕುಮಾರ್, ಎಸ್.ಕೆ.ಗೌತಮ್, ಶ್ರೀಕಾಂತ್, ಉಮಾ, ಬಿ.ಎಂ.ಮುರುಳಿಧರ್, ಹರೀಶ್, ಭಾಗ್ಯ, ಕರಿಯಯ್ಯ, ಜಿಲ್ಲಾ ಬ್ಯಾಂಕ್ ಪ್ರತಿನಿಧಿಗಳಾದ ಎನ್.ದಿನೇಶ್, ಟಿ.ಉಮೇಶ್, ಕೆ.ಆರ್.ನಗರದ ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮೋಹನ್ರಾಜ್, ಸಂಘದ ಸಿಇಓ ಸಚಿನ್ಕುಮಾರ್, ಸಿಬ್ಬಂದಿಗಳಾದ ಮಹದೇವ್, ಕೆ.ಜೆ.ಅಶ್ವಿನಿ ಇದ್ದರು.









