ವಿಜಯ ದರ್ಪಣ ನ್ಯೂಸ್….
ಶತಮಾನ ಸರ್ಕಾರಿ ಕೆಪಿಎಸ್ ಶಾಲೆಯಲ್ಲಿ ಪೋಷಕರಿಂದ ಹಣ ವಸೂಲಿ ವಿರೋಧಿಸಿ :ವಿವಿಧ ಸಂಘಟನೆಗಳಿಂದ ಭಿಕ್ಷಾಟನೆ.

ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು – ಹೋರಾಟಗಾರರ ನಡುವೆ ಹೈಡ್ರಾಮಾ ಪೊಲೀಸರ ಮಧ್ಯಪ್ರವೇಶ
ಕೆ.ಆರ್.ಪೇಟೆ: ಉಚಿತ ಶಿಕ್ಷಣ ಘೋಷಣೆ ಇರುವ ಸರ್ಕಾರಿ ಶಾಲೆಯಲ್ಲೇ ಪೋಷಕರಿಂದ ಹಣ ವಸೂಲಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೆ.ಆರ್.ಪೇಟೆ ಪಟ್ಟಣದ 116 ವರ್ಷಗಳ ಇತಿಹಾಸವಿರುವ ಕೆ.ಪಿ.ಎಸ್ ಸರ್ಕಾರಿ ಶಾಲೆಯಲ್ಲಿ ಕೇಳಿಬಂದಿದೆ.
ಶೌಚಾಲಯ ನಿರ್ವಹಣೆ ನೆಪದಲ್ಲಿ ಪ್ರತಿ ವಿದ್ಯಾರ್ಥಿಯ ಪೋಷಕರಿಂದ ಒಂದು ಸಾವಿರ ಸಂಗ್ರಹಿಸಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿ ವಿವಿಧ ಸಂಘಟನೆಗಳಿಂದ ಭಿಕ್ಷಾಟನೆ ಮಾಡುವ ಮೂಲಕ ಸರಕಾರ,ಶಿಕ್ಷಣ ಸಚಿವ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಯಿತು.
ಭಿಕ್ಷಾಟನೆಯಿಂದ ಛೀಮಾರಿ
ಹಣ ವಸೂಲಿ ಖಂಡಿಸಿ ಕೆ.ಆರ್. ಪೇಟೆ ಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ವಿನೂತನ ಪ್ರತಿಭಟನೆ ನಡೆಸಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೂ ಪಾಲಿಶ್ ಮಾಡಿ, ಭಿಕ್ಷಾಟನೆ ಎತ್ತಿ ಹಣ ಸಂಗ್ರಹಿಸಿದ ಹೋರಾಟಗಾರರು “ಸರ್ಕಾರ ಶಾಲೆ ನಡೆಸಲು ಸಾಧ್ಯವಿಲ್ಲದಿದ್ದರೆ ನಾವೇ ಭಿಕ್ಷೆ ಬೇಡಿ ನಡೆಸುತ್ತೇವೆ ಎಂದು ಶಿಕ್ಷಣ ಸಚಿವರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಗೆ ಛೀಮಾರಿ ಹಾಕಿದರು.

ಸಂಗ್ರಹವಾದ 12.513 ಹಣವನ್ನು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲೇ ಪ್ರದರ್ಶಿಸಿದರು.
ಕಪ್ಪು ಚುಕ್ಕೆ V/S ಕಳಂಕ ವಾಗ್ಯುದ್ಧ
ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಕೆಲ ಪೋಷಕರು ಈ ರೀತಿ ಭಿಕ್ಷಾಟನೆ ಮಾಡಿ 116 ವರ್ಷದ ಶಾಲೆಗೆ ಕಪ್ಪು ಚುಕ್ಕೆ ತರಬೇಡಿ.ಶಾಲೆಯ ಗೌರವಕ್ಕೆ ಧಕ್ಕೆ ತರಬೇಡಿ ಎಂದು ಹೋರಾಟಗಾರರ ವಿರುದ್ಧ ಕಿಡಿಕಾರಿದರು.
ಇದಕ್ಕೆ ತಕ್ಷಣ ತಿರುಗೇಟು ನೀಡಿದ ಹೋರಾಟಗಾರರು, ಬಡ ಪೋಷಕರಿಂದ 1000 ವಸೂಲಿ ಮಾಡಿ ಉಚಿತ ಶಿಕ್ಷಣ ಹಕ್ಕು ಕಸಿಯೋರೇ ಶಾಲೆಗೆ ನಿಜವಾದ ಕಳಂಕ. ಸರ್ಕಾರ ಸಂಬಳ ಕೊಡುತ್ತೆ, ಅನುದಾನ ಕೊಡುತ್ತೆ. ಮತ್ತೆ ಪೋಷಕರಿಂದ ಯಾಕೆ ವಸೂಲಿ? ಎಂದು ಪ್ರಶ್ನಿಸಿದರು.









