ಜೀವನಮಟ್ಟ ಸುಧಾರಣೆಯ ಆಯ್ಕೆಗಳು………

ವಿಜಯ ದರ್ಪಣ ನ್ಯೂಸ್ ……

ಜೀವನಮಟ್ಟ ಸುಧಾರಣೆಯ ಆಯ್ಕೆಗಳು………

ನಾವು ನಮ್ಮ ಜೀವನದ ಸಾಕಷ್ಟು ಸಮಯವನ್ನು ಯಾವ ಸ್ಥಳದಲ್ಲಿ, ಯಾವ ಪ್ರದೇಶದಲ್ಲಿ, ಯಾವ ವ್ಯಕ್ತಿಗಳೊಂದಿಗೆ, ಯಾವ ಭಾವದೊಂದಿಗೆ ಹೆಚ್ಚು ಹೆಚ್ಚು ಕಳೆಯುತ್ತೇವೆಯೋ ಅದರ ಪ್ರಭಾವ ನಮ್ಮ ಬದುಕಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಬಹುತೇಕ ಅನಿವಾರ್ಯವಾಗಿ ಸಹಜವಾಗಿಯೇ, ಅನುಕೂಲಕ್ಕೆ ತಕ್ಕಂತೆ ನಡೆಯುತ್ತದೆ. ಇವುಗಳ ಮೇಲೆ ನಿಯಂತ್ರಣ ಸಾಧಿಸಬೇಕಿರುವುದು ನಮ್ಮ ಆಯ್ಕೆ ಮತ್ತು ವಿವೇಚನೆಗೆ ಬಿಟ್ಟಿದ್ದು. ಕೆಲವು ಉದಾಹರಣೆಗಳೆಂದರೆ………

ಆಸ್ಪತ್ರೆಗಳಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುತ್ತದೆ,
ಆಟದ ಮೈದಾನದಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನಲಿವನ್ನು ಕೊಡುತ್ತದೆ‌.

ಪೋಲೀಸ್ ಸ್ಟೇಷನ್, ಜೈಲು, ನ್ಯಾಯಾಲಯಗಳಲ್ಲಿ ಸವೆಸುವ ಸಮಯ ಯಾವಾಗಲೂ ಕಹಿ ನೆನಪುಗಳನ್ನು ಉಳಿಸುತ್ತದೆ.
ಗ್ರಂಥಾಲಯದಲ್ಲಿ ಸವೆಸುವ ಸಮಯ ಯಾವಾಗಲೂ ಜ್ಞಾನವನ್ನು ವೃದ್ಧಿಸುತ್ತದೆ.

ಸಾವು, ಸ್ಮಶಾನ, ತಿಥಿಗಳಲ್ಲಿ ಭಾಗವಹಿಸಿದಾಗ ಹೃದಯ ಭಾರವಾಗುತ್ತದೆ.
ಮದುವೆ, ನಾಮಕರಣ, ಗೃಹ ಪ್ರವೇಶ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮನಸ್ಸು ಪ್ರಪುಲ್ಲಗೊಳ್ಳುತ್ತದೆ.

ಸಿನಿಮಾ, ನಾಟಕ, ಸರ್ಕಸ್ ಮುಂತಾದ ಸ್ಥಳಗಳು ಭಾವನೆಗಳನ್ನು ಕೆರಳಿಸುತ್ತವೆ,
ದೇವ ಮಂದಿರ, ಚರ್ಚು, ಮಸೀದಿ, ಮಠ ಮಾನ್ಯಗಳು ಮುಂತಾದ ಪ್ರಾರ್ಥನಾ ಸ್ಥಳಗಳು ಭಾವನೆಗಳನ್ನು ನಿಯಂತ್ರಿಸುತ್ತವೆ.

ಐತಿಹಾಸಿಕ ಮತ್ತು ಪೌರಾಣಿಕ ಘಟನೆಗಳು ಕುತೂಹಲ ಮೂಡಿಸುತ್ತದೆ,
ಪ್ರಸ್ತುತ ರಾಜಕೀಯ ಮತ್ತು ಹಿಂಸಾತ್ಮಕ ಘಟನೆಗಳು ಅಸಹ್ಯ ಮತ್ತು ಬೇಸರ ಮೂಡಿಸುತ್ತದೆ.

ಪ್ರಕೃತಿಯೊಂದಿಗಿನ ಒಡನಾಟ ಜೀವನೋತ್ಸಾಹ ಹೆಚ್ಚಿಸುತ್ತದೆ.
ಆಧುನಿಕ ತಂತ್ರಜ್ಞಾನದ ಒಡನಾಟ ಜೀವನದ ಬಗ್ಗೆ ಜಿಗುಪ್ಸೆ ಹೆಚ್ಚಿಸುತ್ತದೆ.

ಪ್ರಶ್ನಿಸುವ ಮನೋಭಾವ ಮನಸ್ಸನ್ನು ವಿಶಾಲಗೊಳಿಸಿ ಸದಾ ಜಾಗೃತವಾಗಿಟ್ಟಿರುತ್ತದೆ.
ಪ್ರಶ್ನಿಸದೆ ಒಪ್ಪಿಕೊಳ್ಳುವ ಮನೋಭಾವ ಮನಸ್ಸನ್ನು ಸಂಕುಚಿತಗೊಳಿಸಿ ಅರಿವಿನ ಮಟ್ಟವನ್ನು ಕುಗ್ಗಿಸುತ್ತದೆ.

ದ್ವೇಷ, ಅಸೂಯೆ, ಅಹಂಕಾರ, ಪ್ರತಿಕಾರಗಳು, ಸಂಬಂಧಗಳನ್ನು ನಾಶಪಡಿಸುತ್ತದೆ.
ಪ್ರೀತಿ, ಸಹಕಾರ, ತ್ಯಾಗ, ತಾಳ್ಮೆ , ಕರುಣೆ, ಕ್ಷಮೆ ಸಂಬಂಧಗಳನ್ನು ಬೆಳೆಯುತ್ತವೆ.

ಈ ಎಲ್ಲಾ ಆಯ್ಕೆಗಳು ಬಹುತೇಕ ನಮ್ಮ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ.
ಅನಿವಾರ್ಯತೆ ಹೊರತುಪಡಿಸಿ
ನಾವು ಯಾವುದನ್ನು ಎಷ್ಟು ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಬದುಕಿನ ಘನತೆ ನಿರ್ಧರಿಸಲ್ಪಡುತ್ತದೆ. ಆದಷ್ಟು ಉತ್ತಮ ವಾತಾವರಣದಲ್ಲಿ ಜೀವಿಸಲು ಪ್ರಯತ್ನಿಸಿ……….
******************************
ಮೊನ್ನೆ ದಿನಾಂಕ 19/೦7/2025 ಶನಿವಾರ ಆತ್ಮೀಯ ಗೆಳೆಯರಾದ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಶ್ರೀ ಅಮೃತ್ ಕುಮಾರ್ ಅವರ ವೃತ್ತಿ ಜೀವನದ ಬೀಳ್ಕೊಡುಗೆ ಸಮಾರಂಭ ಮತ್ತು ಅದರ ಪ್ರಯುಕ್ತ
” ಹಾದಿಗೆ ಹಚ್ಚಿದ ಹಣತೆ ” ಎಂಬ ಕಿರು ಪುಸ್ತಕ ಬಿಡುಗಡೆ ಕಾರ್ಯಕ್ರಮ ಚಿಕ್ಕಬಳ್ಳಾಪುರದಲ್ಲಿ ನಡೆಯಿತು. ಅಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಿದೆನು.

ಹಾಗೆಯೇ ನಿನ್ನೆ ದಿನಾಂಕ
20. 07. 2025 ರ ಭಾನುವಾರ ಆತ್ಮೀಯ ಮಿತ್ರರಾದ ಪೋಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ವಿಶ್ವನಾಥ್ ಹಾಗೂ ಗೆಳೆಯರಾದ ಸಾಹಿತಿ ಶ್ರೀ ನಾಗಲೇಖ ಅವರು ಅವರ ಮಾತೃ ವಾತ್ಸಲ್ಯ ಫೌಂಡೇಶನ್ ವತಿಯಿಂದ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಏರ್ಪಡಿಸಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ಮನುಷ್ಯ ಸಂಬಂಧಗಳು ಮತ್ತು ಭವಿಷ್ಯದ ದಿನಗಳ ಬಗ್ಗೆ ಮಾತನಾಡಿದೆನು.
****************************

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9663750451..Watsapp)
9844013068……