ವಿಜಯ ದರ್ಪಣ ನ್ಯೂಸ್….
ವಿಜಯಪುರ ಪಟ್ಟಣಕ್ಕೆ ಜಪಾನ್ ಅಧಿಕಾರಿಗಳ ತಂಡ ಭೇಟಿ

ವಿಜಯಪುರ, ದೇವನಹಳ್ಳಿ ತಾಲ್ಲೂಕು: ಕಾವೇರಿ 6 ನೇ ಹಂತದ ನೀರು ಸರಬರಾಜು ಯೋಜನೆಯ ಅವಶ್ಯಕತೆಯ ಕುರಿತು ಅಧ್ಯಯನ ಮಾಡಲು ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆಯ (ಜೈಕಾ) ಅಧಿಕಾರಿಗಳ ತಂಡ ಪಟ್ಟಣಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಪರಿಸರ, ಸಾಮಾಜಿಕ ಮತ್ತು ಹವಾಮಾನ ವಿಷಯ ಪರಿಣತಿ ಮಿಕಿಕೊ ಅಜುಮ, ಪರಿಸರ ಸಾಮಾಜಿಕ ವಿಷಯ ಪರಿಣತಿ ಕಾನಾನಿನೊ, ಆರ್ಥಿಕ ಮತ್ತು ವಾಣಿಜ್ಯ ವಿಶ್ಲೇಷಕಿ ಇಮಿಕೊ ಪುಜಿತ ನೇತೃತ್ವದ ತಂಡ ಮೊದಲಿಗೆ ವಿಜಯಪುರ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ, ಶುದ್ದ ಕುಡಿಯುವ ನೀರಿನ ಲಭ್ಯತೆ, ಸಮಸ್ಯೆ ಕುರಿತು ಪುರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿದರು.
ನಂತರ ಚಿಕ್ಕಬಳ್ಳಾಪುರ ರಸ್ತೆ ಮಾರ್ಗದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕದ ಬಳಿ ತೆರಳಿದ ತಂಡ, ಅಲ್ಲಿನ ವ್ಯವಸ್ಥೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು. ನೀರಿನ ಸಂಗ್ರಹ ಟ್ಯಾಂಕ್ಗಳ ಸಾಮರ್ಥ್ಯದ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಹಲವು ಮನೆಗಳಿಗೆ ಭೇಟಿ ನೀಡಿ ಜನರ ಬಳಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ವಿಚಾರಿಸಿದರು. ವಿಜಯಪುರ ಪಟ್ಟಣದ ವ್ಯಾಪ್ತಿ ದಿನೇ ದಿನೇ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಶುದ್ದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಪಟ್ಟಣದ ನಿವಾಸಿಗಳು ಕುಡಿಯಲು ಕೊಳವೆ ಬಾವಿಯ ನೀರನ್ನು ಆಶ್ರಯಿಸಿದ್ದು, ಕಾವೇರಿ 6 ನೇ ಹಂತದ ನೀರು ಸರಬರಾಜು ಯೋಜನೆಯನ್ನು ವಿಜಯಪುರ ಪಟ್ಟಣಕ್ಕೆ ಅನುಷ್ಠಾನಗೊಳಿಸಿದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಧಿಕಾರಿಗಳ ತಂಡಕ್ಕೆ ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಅವರು ವಿವರಿಸಿದರು.
ಇಲ್ಲಿ ಯಾವುದೇ ನದಿ ಮೂಲಗಳು ಇಲ್ಲ.ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ.
ಕುಡಿಯುವ ನೀರಿಗಾಗಿ ಸಾವಿರಾರು ಅಡಿ ಆಳ ಕೊಳವೆ ಬಾವಿಗಳನ್ನು ಕೊರೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಲಕ್ಷಾಂತರ ರೂ. ವೆಚ್ಚ ಮಾಡಬೇಕಾಗಿದೆ. ಅಷ್ಟು ಆಳ ಕೊರೆದರೂ ನೀರು ಲಭ್ಯತೆಯ ಬಗ್ಗೆ ಖಾತರಿ ಇರುವುದಿಲ್ಲ ಎಂದು ಅಧಿಕಾರಿಗಳ ತಂಡಕ್ಕೆ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್ ತಿಳಿಸಿದರು.
ಪುರಸಭಾ ಸದಸ್ಯರಾದ ನಾರಾಯಣಸ್ವಾಮಿ, ವಿಮಲಾ ಬಸವರಾಜ್, ಪುರಸಭಾ ಕೆಲಸ ಸದಸ್ಯರು, ಪರಿಸರ ಎಂಜಿನಿಯರ್ ಶೇಖರ್ ರೆಡ್ಡಿ, ಪುರಸಭಾ ಸಿಬ್ಬಂದಿ ಮತ್ತಿತರರು ಇದ್ದರು.









