ವಿಜಯ ದರ್ಪಣ ನ್ಯೂಸ್…
ರಾಮಸಮುದ್ರ ಕೆರೆಯಿಂದ ನಗರದ ಎಲ್ಲಾ ಮನೆಗಳಿಗೂ ಕುಡಿಯುವ ನೀರನ್ನು ಹರಿಸಲಾಗುವುದು : ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ಮನೆ ಮನೆಗೂ ಕುಡಿಯುವ ನೀರು
ನಗರದಲ್ಲಿನ ಎಲ್ಲಾ 12840 ಮನೆಗಳಿಗೂ ಕುಡಿಯುವ ನೀರನ್ನು ಹರಿಸುವ ಕೆಲಸದ ಕಾಮಗಾರಿಗಳು ಪ್ರಗತಿಯಲ್ಲಿವೆ ಮನೆ ಮನೆ ಸರ್ವೆ ಕಾರ್ಯ ನಡೆಯುತ್ತಿದೆ, ಅಮೃತ್-2 ಯೋಜನೆಯಡಿ ಸುಮಾರು 93 ಕೋಟಿ ರೂ.ಗಳ ವೆಚ್ಚದಲ್ಲಿ ರಾಮಸಮುದ್ರ ಕೆರೆಯಿಂದ ನಗರದ ಎಲ್ಲಾ ಮನೆಗಳಿಗೂ ಕುಡಿಯುವ ನೀರನ್ನು ಹರಿಸಲಾಗುವುದು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ,
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಕೆರೆಗಳಿಗೆ ಎಚ್ಎನ್ ವ್ಯಾಲಿಯ ನೀರು ಹರಿಸುವ 3ನೇ ಹಂತದ ಕಾಮಗಾರಿಗೆ 250 ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಘೋಷಿಸಿದ್ದು ಈ ಕ್ಷೇತ್ರದ ಮತದಾರರ ಪರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
ಕಳೆದ ನವೆಂಬರ್ ನಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಸೇರಿದಂತೆ ವಿವಿಧ ಕಾಮಗಾರಿಗಳ ಭೂಮಿ ಪೂಜೆ, ಉದ್ಘಾಟನೆ ನೆರವೇರಿಸಲು ಶಿಡ್ಲಘಟ್ಟಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರಲ್ಲಿ ಈ ಕ್ಷೇತ್ರದ ಮತದಾರರ ಪರವಾಗಿ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದೆ ಎಂದು ತಿಳಿಸಿದ ಅವರು ,ಪ್ರಜಾಸೌಧ (ಮಿನಿವಿಧಾನಸೌಧ) ಕೇಂದ್ರ ಗ್ರಂಥಾಲಯ ಕಟ್ಟಡ, ನೆಹರೂ ಕ್ರೀಡಾಂಗಣದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ದಿ ಪಡಿಸುವುದು, ಅಲ್ಪ ಸಂಖ್ಯಾತರ ಕಾಲೋನಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವುದು, ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗೆ ವಿಶೇಷ ಅನುದಾನಕ್ಕೆ ಮನವಿ ಮಾಡಿದ್ದೆ ,
ವಿಶೇಷ ಅನುದಾನ ನೀಡುವ ಭರವಸೆ ನೀಡಿದ್ದರು ಎಂದರು.
ಬಜೆಟ್ ಮುಗಿದಿದೆ ,ಇದೀಗ ಮತ್ತೊಮ್ಮೆ ಅವರನ್ನು ಖುದ್ದು ಭೇಟಿ ಮಾಡಿ ವಿಶೇಷ ಅನುದಾನವನ್ನು ನೀಡುವ ಭರವಸೆಯನ್ನು ನೆನಪಿಸಿ ವಿಶೇಷ ಅನುದಾನವನ್ನು ತಂದು ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳನ್ನು ನಡೆಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.
ಅಜ್ಜ ಕದಿರೇನಹಳ್ಳಿ ಬಳಿ ಸುಮಾರು 3.5 ಎಕರೆ ಜಾಗದಲ್ಲಿ ನೀರಿನ ಶುದ್ಧೀಕರಿಸುವ ಘಟಕವನ್ನು ನಿರ್ಮಿಸಿ ಅಲ್ಲಿಂದ ನಗರದಲ್ಲಿ ಮೂರು ಮೇಲುಸ್ತರದ ಟ್ಯಾಂಕ್ಗಳಿಗೆ ನೀರು ಹರಿಸಿ ಅವುಗಳಿಂದ ಮನೆ, ಹೋಟೆಲ್,ಸಂರ್ಕೀಣ ಕಟ್ಟಡಗಳಿಗೆ ನೀರು ಹರಿಸಲಾಗುವುದು,ನಗರಕ್ಕೆ ಪ್ರತಿ ನಿತ್ಯ 30 ಲಕ್ಷ ಲೀಟರ್ ನೀರನ್ನು ಪಂಪ್ ಮಾಡಿ, ಪ್ರತಿ ಮನೆಗೂ ಸರಾಸರಿ 750 ಲೀಟರ್ ನೀರನ್ನು ಹರಿಸುವ ಯೋಜನೆ ಇದಾಗಿದೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಕಾವೇರಿ ನೀರನ್ನು ಮನೆ ಮನೆಗೂ ಹರಿಸುವಂತೆ ಶಿಡ್ಲಘಟ್ಟದಲ್ಲಿ ರಾಮಸಮುದ್ರ ಕೆರೆ ನೀರನ್ನು ಹರಿಸುವ ಯೋಜನೆ ಇದಾಗಿದ್ದು ಮುಂದಿನ 45 ವರ್ಷಗಳಲ್ಲಿನ ಜನ ಸಂಖ್ಯೆಯ ಆದಾರದ ಅನುಗುಣವಾಗಿ ಯೋಜನೆ ರೂಪಿಸಿದ್ದೇವೆ ಎಂದು ಅವರು ಹೇಳಿದರು.