ವಿಜಯ ದರ್ಪಣ ನ್ಯೂಸ್….
ದಾಖಲೆಯ ಫಲಿತಾಂಶದ ಬಗ್ಗೆ ಎಂಎಲ್ಸಿ ವಿಶ್ವನಾಥ್ ಕಳವಳ

ತಾಂಡವಪುರ ಏಪ್ರಿಲ್ 25: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರೆತೆ ಇದೆ, ಈ ನಡುವೆ ಗ್ರೇಸ್ ಮಾರ್ಕ್ ನೀಡಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿದರೆ ಮುಂದೆ ಅವರ ಭವಿಷ್ಯ ಏನು? ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.
ಅವರು ಇಂದು ಮೈಸೂರು ಜಿಲ್ಲಾ ಪರ್ತಕರ್ತರ ಸಂಘದ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಫಲಿತಾಂಶ ನೋಡಿದರೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಫಲಿತಾಂಶ ಬಂದಿದೆ. ಇದು ಹೇಗೆ ಸಾಧ್ಯವಾಯಿತು?, ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ನಾನು ಕೂಡ ಶಿಕ್ಷಣ ಸಚಿವನಾಗಿದ್ದವನು. ಇಂಟರ್ನಲ್ ಮಾರ್ಕ್ಸ್ 20ಕ್ಕೆ 20 ಅನ್ನು ಕೊಡುತ್ತಾರೆ. ಇನ್ನು ಉಳಿದ 80 ಮಾರ್ಕ್ಸ್ ನಲ್ಲಿ 13 ನಂಬರ್ ತೆಗೆದರೆ ಪಾಸ್. ಈ ರೀತಿಯಾದರೆ ಶಿಕ್ಷಣ ವ್ಯವಸ್ಥೆ ಎಲ್ಲಿಗೆ ಹೋಗಬೇಕು?. ಪಾಸಾದ ವಿದ್ಯಾರ್ಥಿಗಳು ಮುಂದೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರೆತೆ: ಯಾದಗಿರಿ ಜಿಲ್ಲೆಯಲ್ಲಿ 41%, ಬಳ್ಳಾರಿ 31%, ಬೀದರ್ 21% ಶಿಕ್ಷಕರ ಕೊರತೆ ಇದೆ. ಹೀಗೆ ಎಲ್ಲಾ ಜಿಲ್ಲೆಗಳಲ್ಲೂ ಶಿಕ್ಷಕರ ಕೊರತೆ ಇದೆ. ಆದರೂ ಫಲಿತಾಂಶ ನೋಡಿದರೆ ದಾಖಲೆ ಫಲಿತಾಂಶ ಬಂದಿದೆ. ಶಿಕ್ಷಣ ಇಲಾಖೆಯ ಅಭಿವೃದ್ಧಿಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನಲ್ಲಿ 2 ಸಾವಿರ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದರು.
ಆ ಹಣದಲ್ಲೂ ಕಿಕ್ ಬ್ಯಾಕ್ ತಗೋತಾರೆ. ಮೌಲ್ಯ ಮಾಪನ ಕೇಂದ್ರಕ್ಕೆ ಶಿಕ್ಷಣ ಸಚಿವರು ಹೋಗಿದ್ದಾರೆ ಎಂದರೆ ಏನರ್ಥ?, ಇಂಟರ್ನಲ್ 20ಕ್ಕೆ 20 ಕೊಡಿ ಅಂತ ಇವರೇ ಹೇಳಿದ್ದಾರೆ. ಈ ಮೂಲಕ ಮಗುವಿನ ಓದುವ ಉತ್ಸಾಹವನ್ನೇ ಕಸಿದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆಗಳೇ ಇಲ್ಲ. ಸಿಬ್ಬಂದಿ, ಶಿಕ್ಷಕರ ಕೊರತೆ ನಡುವೆಯೂ ಇಷ್ಟೊಂದು ದೊಡ್ಡ ಮಟ್ಟದ ಫಲಿತಾಂಶ ಬರಲು ಹೇಗೆ ಸಾಧ್ಯವಾಯಿತು?. ಮುಂದೆ ಪಿಯುಸಿಯಲ್ಲಿ ಡ್ರಾಪೌಟ್ ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಇಂತಹ ಆಯೋಗ್ಯ ಶಿಕ್ಷಣ ಸಚಿವನನ್ನು ಇಟ್ಟುಕೊಂಡು ರಾಜ್ಯದ ಗತಿ ಏನಾಗಬೇಕು ಎಂದು ಕಿಡಿಕಾರಿದರು.
ಹಿಂದಿಗೆ ಗ್ರೇಡ್ ಕೊಡುವ ವಿಚಾರದಲ್ಲಿ ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನೇ ಕೊಡುವಂತೆ ನ್ಯಾಯಾಲಯ ಛೀಮಾರಿ ಹಾಕಿತು. ಕೋರ್ಟ್ ಛೀಮಾರಿ ಹಾಕಿದ ಎರಡೇ ದಿನಕ್ಕೆ ಫಲಿತಾಂಶ ಪ್ರಕಟ ಆಯ್ತು?. ಹಾಗಾದರೆ ಮಾರ್ಕ್ಸ್ ಎರಡೇ ದಿನಗಳಲ್ಲಿ ಹೇಗೆ ಕೊಟ್ಟಿರಿ?. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಯುಸಿ ಫೇಲ್. ಅವನನ್ನು ಶಿಕ್ಷಣ ಸಚಿವನನ್ನಾಗಿ ಮಾಡಿದ್ದಾರೆ. ಸಿದ್ದರಾಮಯ್ಯನಿಗೆ ಬುದ್ಧಿ ಇಲ್ಲ. ಬರೀ ಮಧು ಅಂತ ಹೆಸರಿಟ್ಟಿಕೋ. ಮಧು ಬಂಗಾರಪ್ಪ ಅಂತ ನಿಮ್ಮಪ್ಪನ ಹೆಸರಿಟ್ಟುಕೊಂಡು ಅವರಿಗೆ ಯಾಕೆ ಕೆಟ್ಟ ಹೆಸರು ತರುತ್ತೀಯಾ ಎಂದು ಹೆಚ್ ವಿಶ್ವನಾಥ್ ಹರಿಹಾಯ್ದರು.
ಶೋಷಿತ ಸಮುದಾಯಗಳಿಗೆ ಅನ್ಯಾಯ? ಒಳ ಮೀಸಲಾತಿ ಹಂಚಿಕೆಯಲ್ಲಿ ಶೋಷಿತ ಸಮುದಾಯಗಳಿಗೆ ಅನ್ಯಾಯವಾಗಿದೆ. ಸಚಿವ ಮಹದೇವಪ್ಪ ಶೋಷಿತ ಸಮುದಾಯಕ್ಕೆ ಮಾರಕ. ನಿನ್ನೆ ಹಂಚಿಕೆ ಮಾಡಿದ್ದು ಮೀಸಲಾತಿಯೇ? ದೇವರಾಜ ಅರಸರು ಏನೇನು ಕೊಡುಗೆಗಳನ್ನು ಕೊಟ್ಟಿದ್ದಾರೋ ಅವನ್ನೆಲ್ಲಾ ಕುಲಗೆಡಿಸಿ ಹೋಗುತ್ತಿದ್ದಾರೆ. 5 ಕೆ.ಜಿ ಅಕ್ಕಿ, ಹೆಣ್ಮಕ್ಕಳಿಗೆ 2 ಸಾವಿರ ಕೊಟ್ಟಿರುವುದೇ ಇವರ ಸಾಧನೆ ಎಂದು ವಿಶ್ವನಾಥ್ ಟೀಕಿಸಿದರು.










