ದೇವನಹಳ್ಳಿ ಕ್ರೀಡಾಂಗಣದಲ್ಲಿ
ಜೂನ್, 21ರಂದು ವಿಶ್ವ ಯೋಗ ದಿನ: ಜಿಲ್ಲಾಧಿಕಾರಿ ಡಾ ಕೆ ಎನ್ ಅನುರಾಧ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೂ,15 :
‘ *ಉತ್ತಮ ಆರೋಗ್ಯಕ್ಕಾಗಿ ಯೋಗ, ವೃದ್ದಾಪ್ಯಕ್ಕಾಗಿ ಯೋಗ* ಎಂಬ’ ಘೋಷಣೆಯೊಂದಿಗೆ 12 ನೇ ಯೋಗ ದಿನವನ್ನು ಆಚರಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಯೋಗ ದಿನದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ, ದೈನಂದಿನ ಕೆಲಸ ಕಾರ್ಯಗಳ ಜೊತೆ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರ ಆದ್ಯತೆಯಾಗಿದ್ದು, ಯೋಗದಿಂದ ರೋಗ ಜಯಿಸುವ ಯೋಗ ದಿನಾಚರಣೆ ಯಶಸ್ಸಿಗೆ ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಯೋಗ ಸಂಸ್ಥೆಗಳವರು ಶ್ರಮಿಸಬೇಕೆಂದರು.
ದೇವನಹಳ್ಳಿ ಪಟ್ಟಣದ ಕ್ರೀಡಾಂಗಣದಲ್ಲಿ ಜರುಗುವ ಯೋಗ ದಿನಕ್ಕೆ ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಶಾಸಕರು ಮತ್ತು ಜನ ಪ್ರತಿನಿಧಿಗಳನ್ನು ಆಹ್ವಾನಿಸಲು ಸೂಚಿಸಿದರು.
ಯೋಗಾರ್ಥಿಗಳಿಗೆ ಯೋಗ ಮಾಡಲು ಅನುಕೂಲವಾಗುವಂತೆ ಉತ್ತಮ ಮ್ಯಾಟ್ಗಳ ವ್ಯವಸ್ಥೆ, ಜಮಖಾನ, ಟೀ ಶರ್ಟ್ ಗಳು, ಶುದ್ದ ಕುಡಿಯುವ ನೀರು, ಉಪಹಾರ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿಸಲಾಯಿತು.
ಆರೋಗ್ಯ ಇಲಾಖೆಯಿಂದ ಒಂದು ಆ್ಯಂಬುಲೆನ್ಸ್ ಅನ್ನು ಸ್ಥಳದಲ್ಲಿ ನಿಯೋಜಿಸಬೇಕು, ವೈದ್ಯಾಧಿಕಾರಿಗಳು, ಸಿಬ್ಬಂದಿ ಔಷಧೋಪಚಾರವಿರಬೇಕು, ಕ್ರೀಡಾಂಗಣದಲ್ಲಿ ಉತ್ತಮ ವೇದಿಕೆ ಸಿದ್ದಪಡಿಸಬೇಕು ಎಂದು ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನುರಾಧ ಅವರು ಸೂಚಿಸಿದರು.
ಪೂರ್ವ ಭಾವಿ ಸಭೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಕೆ.ಟಿ. ಅಶ್ವಿನಿ, ವೈದ್ಯಾಧಿಕಾರಿ ಡಾ. ವಿಜಯಲಕ್ಷ್ಮಿ, ಡಿ.ಹೆಚ್ಒ ಲಕ್ಕ ಕೃಷ್ಣಾರೆಡ್ಡಿ, ಜಂಟಿ ನಿರದೇಶಕರು ಕೈಗಾರಿಕಾ ಇಲಾಖೆ ಯೋಗ ದಿನಾಚರಣೆಯ ನೋಡೆಲ್ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ, ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.











