ವಿಜಯ ದರ್ಪಣ ನ್ಯೂಸ್….
ಹಣ ಹೂಡು, ಹಣ ಮಾಡು’ ಎಂಬಂತಾಗಿದೆ ಈಗಿನ ರಾಜಕಾರಣ: ಮಹಿಮಾ ಜೆ ಎಚ್ ಪಟೇಲ್

ಶಿಡ್ಲಘಟ್ಟ : ‘ಹಣ ಹೂಡು, ಹಣ ಮಾಡು’ ಎಂಬಂತಾಗಿದೆ ಈಗಿನ ರಾಜಕಾರಣ ಇಂತಹ ಪದ್ಧತಿ ತೊಲಗಿ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ರಾಜಕಾರಣ ಪೂರಕವಾಗಿರಬೇಕು ಎಂದು ಸಂಯುಕ್ತ ಜನತಾದಳ(ಜೆಡಿಯು)ದ ರಾಜ್ಯಾಧ್ಯಕ್ಷ ಹಾಗು ಮಾಜಿ ಶಾಸಕ ಮಹಿಮಾ ಜೆ.ಎಚ್.ಪಟೇಲ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜಕಾರಣದ ಕೆಟ್ಟ ಪರಿಸ್ಥಿತಿಯನ್ನು ಬದಲಿಸುವವರು ನಾವಾಗಬೇಕು ,ರಾಜಕಾರಣ ಕೆಟ್ಟಿದೆ ಎನ್ನುವ ಮಾತುಗಳು ಕೇಳಿ ನಿರಾಶರಾಗುವ ವಿಷಯ ಬದಿಗಿಟ್ಟು ಪ್ರತಿಯೊಬ್ಬರೂ ಆಶಾವಾದಿಗಳಾಗಬೇಕು ಎಂದರು.
ಆರೋಗ್ಯ, ಶಿಕ್ಷಣ, ಆಡಳಿತ, ಕೃಷಿ ಹಾಗೂ ಪರಿಸರದ ಕಡೆಯ ಆಶಯಗಳೊಂದಿಗೆ ರಾಜ್ಯದಾದ್ಯಂತ ಇರುವ ಪ್ರಜ್ಞಾವಂತರನ್ನು ಒಗ್ಗೂಡಿಸುವ ಮೂಲಕ ಜೆಡಿಯು ಪಕ್ಷ ಸಂಘಟನೆ ಮಾಡಲಾಗುತ್ತಿದೆ ಹಾಗಾಗಿ ಮಠಾದೀಶರಿಂದ ಹಿಡಿದು ರಾಜಕಾರಣಿಗಳವರೆಗೆ ಎಲ್ಲಾ ಸಮಾನ ಮನಸ್ಕರು ಒಗ್ಗೂಡಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ನುಡಿದರು.
ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡಾ.ಕೆ.ನಾಗರಾಜ್ ಅವರನ್ನು ಈಗಾಗಲೇ ಘೋಷಿಸಿದ್ದು, ಪ್ರಜ್ಞಾವಂತ ಪದವೀಧರ ಮತಭಾಂದವರು ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ನಾಗರಾಜ್ ಮಾತನಾಡಿ, ಈ ಹಿಂದೆ 2017ರ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದೆ ,ಆದರೆ ಇದೀಗ ಜೆಡಿಯು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದು, ಗೆಲ್ಲುವ ಭರವಸೆಯಿಂದ ಐದು ಜಿಲ್ಲೆಗಳಲ್ಲಿ ಪ್ರವಾಸ ಆರಂಭಿಸಲಾಗಿದ್ದು, ಪ್ರತಿಯೊಬ್ಬ ಮತದಾರ ಬಂಧಗಳನ್ನು ಖುದ್ದಾಗಿ ಭೇಟಿ ಮಾಡಿ ಮತಯಾಚನೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಯು ಪಕ್ಷದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಗಂಗೂರ್, ಕೆ.ರಂಗನಾಥ್, ಮಹಿಳಾ ಘಟಕದ ರಾಜ್ಯ ಘಟಕದ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಕೆ.ವಿ.ಶಿವರಾಂ, ಉಪಾಧ್ಯಕ್ಷೆ ಶಾಂತಕುಮಾರಿ,ನಾರಾಯಣಸ್ವಾಮಿಗೌಡ, ಡಿ.ಜೆ.ಪ್ರಭು,ಯಾರಬ್ ಬಾಬು ಮನು, ಯಾರಬ್ ಮುಂತಾದವರು ಹಾಜರಿದ್ದರು.








