ವಿಜಯ ದರ್ಪಣ ನ್ಯೂಸ್….
ಅದ್ದೂರಿಯಾಗಿ ನಡೆದ ಶ್ರೀ ಗಂಗಾದೇವಿ ಅಮ್ಮನವರ ಜಾತ್ರಾ ಮಹೋತ್ಸವ

ಶಿಡ್ಲಘಟ್ಟ : ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ, ಗ್ರಾಮದೇವತೆಗಳ ಜಾತ್ರಾ ಮಹೋತ್ಸವದ ಅಂಗವಾಗಿ ತಂಬಿಟ್ಟಿನ ದೀಪೋತ್ಸವಗಳನ್ನು ಭಕ್ತಿ, ಬಾವ ಹಾಗು ವಿಜೃಂಭಣೆಯಿಂದ ಆಚರಿಸಲಾಯಿತು.
ತಾಲ್ಲೂಕಿನ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಮೇಲೂರಿನ ಶ್ರೀಗಂಗಾದೇವಿ ಅಮ್ಮನವರಿಗೆ ದೀಪೋತ್ಸವಗಳು ಈ ಹಿಂದೆ ಒಂದೊಂದು ಸಮುದಾಯದವರು ಒಂದೊಂದು ದಿನದಂತೆ ಆಚರಿಸುವ ವಾಡಿಕೆಯಿತ್ತು.
ಕಳೆದ 25 ವರ್ಷಗಳ ನಂತರ ಇದೇ ಮೊಟ್ಟಮೊದಲ ಬಾರಿಗೆ ಮಳ್ಳೂರು ಗ್ರಾಮಸ್ಥರೆಲ್ಲರೂ ಜಾತಿ, ಮತ, ಬೇಧವಿಲ್ಲದೆ ಒಂದಾಗಿ ಅದ್ದೂರಿಯಾಗಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಆಚರಿಸಿದ್ದು ವಿಶೇಷವಾಗಿತ್ತು.
ನೂರಾರು ಮಂದಿ ಹೆಣ್ಣು ಮಕ್ಕಳು, ಮಹಿಳೆಯರು ತಂಬಿಟ್ಟು ದೀಪಗಳನ್ನು ವಿವಿಧ ಬಗೆಯ ಅಲಂಕಾರಿಕ ಹೂವಿನ ಬುಟ್ಟಿಗಳಲ್ಲಿ ಇಟ್ಟುಕೊಂಡು ಮಳ್ಳೂರಿನಿಂದ ಮೇಲೂರಿನ ವರೆಗೆ ರಸ್ತೆಯಲ್ಲಿ ಕಾಲ್ನಡಿಗೆ ಮೂಲಕ ಮೆರವಣಿಗೆಯಲ್ಲಿ ತೆರಳಿ ಮೇಲೂರಿನ ಗ್ರಾಮದೇವತೆ ಶ್ರೀ ಗಂಗಾದೇವಿ ಅಮ್ಮನವರಿಗೆ ದೀಪದಾರತಿ ಬೆಳಗಿ ನೇಮಿಸಿದರು.

ಗ್ರಾಮದ ಬೀದಿಗಳಿಗೆ ತಳಿರು ತೋರಣಗಳನ್ನು ಕಟ್ಟಿ, ವಿದ್ಯುತ್ ದೀಪಗಳಿಂದ ಅಲಂಕಾರ ಆಕರ್ಷಣೀಯವಾಗಿತ್ತು ,ಬೃಹತ್ ಗಾತ್ರದ ಸ್ವಾಗತ ಕಮಾನುಗಳು ತಲೆ ಎತ್ತಿ ನಿಂತಿದ್ದವು. ತಮಟೆ ವಾದನಗಳಿಗೆ ಗ್ರಾಮದ ಯುವಕರು ಕುಣಿದು ಕುಪ್ಪಳಿಸಿದರು ,ಗ್ರಾಮದಲ್ಲಿ ಹಬ್ಬದ ವಾತಾವರಣ ಏರ್ಪಡುವುದರ ಜೊತೆಗೆ, ದೂರದ ಊರುಗಳಿಂದ ಬಂದಿದ್ದ ನೆಂಟರಿಷ್ಟರಿಂದಾಗಿ ಮನೆಗಳಲ್ಲಿಯೂ ಸಂಭ್ರಮ ಮನೆ ಮಾಡಿತ್ತು.
ಶ್ರೀಗಂಗಾದೇವಿ ಅಮ್ಮನವರ ದೀಪೋತ್ಸವ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಮಂದಿ ಭಕ್ತಾಧಿಗಳು ಪಾಲ್ಗೊಂಡಿದ್ದರು.








