ಅಹಿಂದ ವರ್ಗದ ನಿಗಮ ಮಂಡಳಿಗಳಿಗೆ 300 ಕೋಟಿ ರೂ ಮೀಸಲಿಡಲು ಆಗ್ರಹ
ವಿಜಯ ದರ್ಪಣ ನ್ಯೂಸ್….
ಅಹಿಂದ ವರ್ಗದ ನಿಗಮ ಮಂಡಳಿಗಳಿಗೆ 300 ಕೋಟಿ ರೂ ಮೀಸಲಿಡಲು ಆಗ್ರಹ

ತಾಂಡವಪುರ ಫೆಬ್ರವರಿ 10 ರಾಜ್ಯ ಸರ್ಕಾರ ಬಜೆಟ್ನಲ್ಲಿ ಅಹಿಂದ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಿ, ಅಹಿಂದ ವರ್ಗದ ಎಲ್ಲಾ ನಿಗಮ ಮಂಡಳಿಗೆ ಕನಿಷ್ಠ 300 ಕೋಟಿ ಅನುದಾನ ನೀಡುವಂತೆ ಕರ್ನಾಟಕ ರಾಜ್ಯ ಅಹಿಂದ ಒಕ್ಕೂಟ ಮನವಿ ಮಾಡಿತು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿ ಗಾರರೊಂದಿಗೆ ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್.ನಾಗೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ವರ್ಗದ ಜನರಿಂದ ಅಧಿಕಾರಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಹಿಂದ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಈ ಸಮುದಾಯಗಳು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆರ್ಥಿಕ ಸೌಲಭ್ಯವನ್ನು ನೀಡುವ ಮೂಲಕ ಸಬಲೀಕರಣ ಮಾಡಬೇಕಿರುವುದು ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದ ಹಿಂದುಳಿದ ಎಲ್ಲಾ ನಿಗಮ ಮಂಡಳಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗದ ನಿಗಮ ಮಂಡಳಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದರು.
ಪ್ರಮುಖವಾಗಿ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ನಿಗಮಗಳಿಂದ ನೀಡುವ ನೇರ ಸಾಲ ಯೋಜನೆಯನ್ನು ಗರಿಷ್ಠ 2 ಲಕ್ಷಕ್ಕೆ ಹೆಚ್ಚಳ ಮಾಡಬೇಕು, ಮಹಿಳಾ ಸಬಲೀಕರಣಕ್ಕೆ ಅನುಕೂಲವಾಗುವಂತೆ ಪತ್ಯೇಕ ಅನುದಾನ ಘೋಷಿಸಬೇಕು, ಯುವಕ, ಯುವತಿಯರು ಸ್ವಯಂ ಉದ್ಯೋಗದಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಶೇ.75 ರಷ್ಟು ಸಹಾಯ ಧನದಡಿ ನಿವೇಶನ ಹಾಗೂ ಕೈಗಾರಿಕೆ ಸ್ಥಾಪಿಸಲು ನಿಗಮದಿಂದ ಸಾಲ ನೀಡುವ ಯೋಜನೆ ರೂಪಸಬೇಕು. ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಪ್ರತ್ಯೇಕ ಅನುದಾನ ಘೋಷಿಸಬೇಕುಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಬಿ.ಜಿ.ಕೇಶವ, ಡಾ.ಶಾಂತರಾಜೇ ಅರಸ್, ಗೀತಾ, ಮೀನಾಕ್ಷಿ, ಸಿದ್ದರಾಜು, ಶ್ರೀಕಾಂತ ಯಾದವ್, ರವಿಕುಮಾರ್, ಮಹದೇವಪ್ಪ, ಮಹೇಶ್, ಲಕ್ಷ್ಮೀ, ಪವಿತ್ರ ಉಪಸ್ಥಿತರಿದ್ದರು.
