ವಿಜಯ ದರ್ಪಣ ನ್ಯೂಸ್…
ಕಲ್ಯಾಣಿಗಳನ್ನು ಜೋಪಾನ ಮಾಡುವ ಹೊಣೆ ನಮ್ಮೆಲ್ಲರದಾಗಿರಬೇಕು: ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ಕಲ್ಯಾಣಿಗಳು ನಮ್ಮ ಧಾರ್ಮಿಕ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿವೆ ,ಕೇವಲ ನೀರು ಸಂಗ್ರಹ ಮಾಡಿಟ್ಟಿಕೊಳ್ಳುವ ಸ್ಥಳಗಳಲ್ಲ ಬದಲಿಗೆ ಕಲ್ಯಾಣಿಗಳನ್ನು ಜೋಪಾನ ಮಾಡುವ ಹೊಣೆ ನಮ್ಮೆಲ್ಲರದಾಗಿರಬೇಕು
ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ‘ಮಲ್ಲಿಶೆಟ್ಟಿಪುರ’ದ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರಮದಾನಗಳ ಮೂಲಕ ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛ ಗೊಳಿಸಿ ಅಭಿವೃದ್ಧಿಗೊಳಿಸುವ ಜತೆಗೆ ಸ್ವಚ್ಛ ಗ್ರಾಮಗಳನ್ನು ನಿರ್ಮಿಸೋಣ ಹಾಗು ಕಲ್ಯಾಣಿಗಳನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳುವ ಮೂಲಕ ಧಾರ್ಮಿಕ ಕ್ಷೇತ್ರಗಳ ಕಾರ್ಯಕ್ರಮಗಳಿಗೆ ಹಾಗೂ ರೈತರಿಗೆ ಉಪಯೋಗಕ್ಕೆ ಬರುವಂತೆ ಮಾಡುವುದು ಸರ್ಕಾರ ಹಾಗೂ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮವು ನಮ್ಮ ಗ್ರಾಮೀಣ ಜಲ ಸಂಪನ್ಮೂಲಗಳನ್ನು ರಕ್ಷಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಹೂಳುಗಳಿಂದ ತುಂಬಿದ್ದ ಈ ಕಲ್ಯಾ ಣಿಯನ್ನು ಇಂದು ನಾವು ಸ್ವಚ್ಛಗೊಳಿಸಿ, ಭವಿಷ್ಯದಲ್ಲಿ ರೈತರ ಜಾನುವಾರುಗಳಿಗೆ ಮತ್ತು ಭೂಜಲ ಸಂರಕ್ಷಣೆಗೆ ಉಪಯುಕ್ತಗೊಳಿಸಿದ್ದೇವೆ ,ಸ್ವಚ್ಛತೆಯೇ ದೇವರು, ಸ್ವಚ್ಛತೆಯೇ ಸೇವೆ ಈ ರೀತಿಯ ಶ್ರಮದಾನಗಳ ಮೂಲಕ ನಮ್ಮ ಗ್ರಾಮಗಳನ್ನು ಮಾದರಿಯಾಗಿ ಮಾಡೋಣ ಗ್ರಾಮ ಪಂಚಾಯತಿ, ಯುವಕರು, ಮಹಿಳೆಯರು ಎಲ್ಲರ ಸಹಕಾರಕ್ಕೆ ಧನ್ಯವಾದಗಳು ,ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಮೂಲಕ ಶಿಡ್ಲಘಟ್ಟವನ್ನು ಸ್ವಚ್ಛ ಕ್ಷೇತ್ರವನ್ನಾಗಿ ಮಾಡೋಣ ಎಂದರು.
ಜಿಲ್ಲಾ ಪಂಚಾಯತಿ ಸಿಇಒ ಡಾ.ವೈ.ನವೀನ್ ಭಟ್ ಮಾತನಾಡಿ, ಜಿಲ್ಲೆ ಹಾಗೂ ತಾಲೂಕಿನಾದ್ಯಂತ ಮರೆತು ಹೋಗಿದ್ದ ಅಥವಾ ತ್ಯಾಜ್ಯದಿಂದ ತುಂಬಿದ್ದ ಪುರಾತನ ಕಲ್ಯಾಣಿಗಳಿಗೆ ಹೊಸ ಜೀವ ನೀಡಲಾಗುತ್ತಿದೆ, ಅಂತರ್ಜಲ ಮಟ್ಟ ಹೆಚ್ಚಿಸುವ ಮೂಲಕ ಜಲ ಮೂಲ ಗಳನ್ನು ಸಂರಕ್ಷಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಮಲ್ಲಿಶೆಟ್ಟಿಪುರ ಕಲ್ಯಾಣಿಗೆ ಅನೇಕ ವರ್ಷಗಳ ಇತಿಹಾಸ ವಿದೆ. ಆದರೆ ಮಣ್ಣು, ಕಸ, ಕಡ್ಡಿ ತುಂಬಿಕೊಂಡು ನೀರು ಶೇಖರಣೆ ಸರಿಯಾದ ರೀತಿಯಲ್ಲಿ ಆಗದೆ ತಳ ಭಾಗದಲ್ಲಿ
ಕಲ್ಲು, ಕಸ ,ಗಿಡಗಳು ತುಂಬಿಕೊಂಡಿದ್ದರಿಂದ ನೀರು ಶೇಖರಣೆಯಾಗದೆ ಹಾಗೇ ಉಳಿದುಕೊಂಡಿದೆ ,ಈ ಅಭಿಯಾನದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಭಾಗವಹಿಸಿ ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ಯಶಸ್ವಿ ಮಾಡಿದ್ದೇವೆ ಎಂದು ಹೇಳಿದರು.
ತಾಲ್ಲೂಕು ಪಂಚಾಯತಿ ಇಒ ಆರ್.ಹೇಮಾವತಿ,
ನಗರಸಭೆ ಪೌರಾಯುಕ್ತ ಜಿ. ಅಮೃತ ಗೌಡ ,
ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ಯೋಜನಾಧಿಕಾರಿ ಅನಿಲ್ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವಿ,ರೇಷ್ಮೆ ಇಲಾಖೆ ಸಹಾಯಕ
ನಿರ್ದೇಶಕ ಅಕ್ಮಲ್ ಪಾಷ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಪಿ.ಮಂಜುಳಾ, ತುಮ್ಮನಹಳ್ಳಿ ಪಿಡಿಒ ಕಾತ್ಯಾಯಿನಿ, ವಿವಿಧ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಮತ್ತು ಗ್ರಾ.ಪಂ.ಸಿಬ್ಬಂದಿ, ನರೇಗಾ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.










