ವಿಜಯ ದರ್ಪಣ ನ್ಯೂಸ್……
ಆಲೂಗಡ್ಡೆಗೆ ಬೆಂಬಲ ಬೆಲೆ ಸಿಗದೆ ರೈತರು ಕಂಗಾಲು

ಶಿಡ್ಲಘಟ್ಟ : ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಆಲೂಗಡ್ಡೆಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ
ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ಆಲೂಗಡ್ಡೆ ಬೆಳೆಗಾರರು ಬೆಲೆ ಕುಸಿತದಿಂದ ಪರದಾಡುವಂತಾಗಿದೆ.
ಆಧುನಿಕ ತಂತ್ರಜ್ಞಾನದ ಮೊರೆ ಹೋದರೂ, ಮಾರುಕಟ್ಟೆ ಬೆಲೆಗಳ ವೈಪರೀತ್ಯಗಳಿಂದಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ ರೈತರ ಬದುಕು.8 ಎಕಕರಯಲ್ಲಿ ಬೆಳೆದ ಆಲೂಗಡ್ಡೆಗೆ ಸೂಕ್ತ ಬೆಲೆ ಸಿಗದೆ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ತಾಲ್ಲೂಕಿನ ಅಬ್ಲೂಡು ಗ್ರಾಮದ ಬಹುತೇಕ ರೈತರು ಈ ಹಿಂದೆ ಹೆಚ್ಚಾಗಿ ರೇಷ್ಮೆ ಕೃಷಿಯನ್ನೇ ಅವಲಂಬಿಸಿದ್ದರು, ಆದರೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಾಳಿಂಬೆ ಮತ್ತು ಹೂವಿನ ತೋಟಗಳು ಹೆಚ್ಚಾದಂತೆ ರೇಷ್ಮೆ ಸಾಕಾಣಿಕೆಯಲ್ಲಿ ಸಮಸ್ಯೆಗಳು ಎದುರಾದವು ,ಹೀಗಾಗಿ ರೇಷ್ಮೆ ಕೃಷಿ ಕೈಬಿಟ್ಟ ರೈತರು, ಕಳೆದ ಬಾರಿ ಟೊಮ್ಯಾಟೋ ಬೆಳೆದು ಸೈ ಎನಿಸಿಕೊಂಡಿದ್ದರು.
ಈ ಬಾರಿ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೆ ಬೇಡಿಕೆ ಇರಬಹುದು ಎಂಬ ನಿರೀಕ್ಷೆಯಲ್ಲಿ ಆಲೂಗಡ್ಡೆ ಬೆಳೆದು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ ,ಬೆಲೆ ಕುಸಿತಕ್ಕೆ ಜಾಗತಿಕ ಮತ್ತು ಸ್ಥಳೀಯ ಕಾರಣಗಳು ಜಾಗತಿಕ ಕಾರಣದಿಂದ ರೈತರನ್ನು ಹೈರಾಣಾಗಿಸಿವೆ.
ಮುಖ್ಯವಾಗಿ ವಿದೇಶಗಳಿಗೆ ರಫ್ತು ಸ್ಥಗಿತಗೊಂಡಿರುವುದು ದೊಡ್ಡ ಹೊಡೆತ ನೀಡಿದೆ ಇದರ ಜತೆಗೆ ಹೋಟೆಲ್ ಉದ್ಯಮದಲ್ಲಿ ಮಂದಗತಿ ಹಾಗೂ ಈ ಅವಧಿಯಲ್ಲಿ ಮದುವೆ ಮತ್ತು ಸಾರ್ವಜನಿಕ ಸಮಾರಂಭಗಳ ಅಬ್ಬರ ಕಡಿಮೆ ಇರುವುದು ಆಲೂಗಡ್ಡೆ ಬೇಡಿಕೆಯನ್ನು ಕುಗ್ಗಿಸಿದೆ ಎನ್ನಲಾಗಿದೆ.
ವ್ಯಾಪಾರಸ್ಥರು ತೋಟಕ್ಕೆ ಬಂದು ಕೇಳುತ್ತಿರುವ ಕಡಿಮೆ ಬೆಲೆಗೆ ಆಲೂಗಡ್ಡೆ ಮಾರಾಟ ಮಾಡುವುದೋ
ಅಥವಾ ಬೆಲೆ ಹೆಚ್ಚಾಗುವವರೆಗೂ ಕಾಯುವುದೋ ಎಂದು ಅರ್ಥವಾಗದ ಸ್ಥಿತಿಯಲ್ಲಿ ಬೆಳೆಗಾರರಿದ್ದು, ಸರ್ಕಾರ ಇತ್ತ ಗಮನಹರಿಸಿ ಬೆಳೆಗಾರರ ನೆರವಿಗೆ ಬರಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ರೈತರಾದ ‘ಅಬ್ಲೂಡು ಕೃಷ್ಣ’ ಮಾತನಾಡಿ 8 ಎಕರೆ ಪ್ರದೇಶದಲ್ಲಿ ಯಂತ್ರೋಪಕರಣಗಳನ್ನು ಬಳಸಿ ಆಲೂಗಡ್ಡೆ ನಾಟಿ ಮಾಡಲಾಗಿತ್ತು ಫಸಲು ಫಲವತ್ತಾಗಿದ್ದು, ಗುಣಮಟ್ಟದಿಂದ ಕೂಡಿದೆ ,
ಸುಮಾರು 100 ರಿಂದ 125 ಟನ್ನಷ್ಟು (ಸುಮಾರು 2,500 ಮೂಟೆಗಳು) ಇಳುವರಿ ನಿರೀಕ್ಷಿಸಲಾಗಿದೆ, ಪ್ರಸ್ತುತ ಮಾರುಕಟ್ಟೆಯಲ್ಲಿ 52 ಕೆ.ಜಿ.ಯ ಒಂದು ಮೂಟೆ ಆಲೂಗಡ್ಡೆಗೆ ಕೇವಲ 450 ರೂ.ಗಳಿಂದ 500 ರೂ.ಗಳು ಸಿಗುತ್ತಿದೆ ,ಆದರೆ ರೈತರಿಗೆ ಒಂದು ಕೆ.ಜಿ. ಆಲೂಗಡ್ಡೆ ಬೆಳೆಯಲು ಸುಮಾರು 10 ರೂಪಾಯಿಗಳಷ್ಟು ಖರ್ಚಾಗುತ್ತಿದೆ. ಪ್ರತಿ ಮೂಟೆಗೆ ಕನಿಷ್ಠ 800 ರಿಂದ 1,000 ರೂಪಾಯಿ ಬೆಲೆ ಸಿಕ್ಕರೆ ನಮಗೆ ಲಾಭವಾಗುತ್ತದೆ. ಇಲ್ಲದಿದ್ದರೆ ಹಾಕಿದ ಅಸಲು ಸಿಗುತ್ತದೆ, ನಮ್ಮ ಕಷ್ಟಕ್ಕೆ ಯಾವುದೇ ಬೆಲೆ ಇಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.










