ವಿಜಯ ದರ್ಪಣ ನ್ಯೂಸ್….
ಉತ್ತಮ ಶಿಕ್ಷಣದ ಜೊತೆಗೆ ಸಮಾಜಕ್ಕೆ ಪರೋಪಕಾರಿಯಾಗಿ ಇರುವುದು ಪ್ರತಿ ಪ್ರಜೆಯ ಜವಾಬ್ದಾರಿ: ಕುಲಪತಿ ಡಾ.ಬಿ.ಕೆ.ರವಿ

ಶಿಡ್ಲಘಟ್ಟ : ಉತ್ತಮ ಶಿಕ್ಷಣ ಪಡೆದು ಉದ್ಯೋಗ ಹಿಡಿಯುವುದೇ ಜೀವನದ ಗುರಿ ಅಲ್ಲ ಸಮಾಜಮುಖಿ ವ್ಯಕ್ತಿತ್ವ ರೂಢಿಸಿಕೊಂಡು, ಸಮಾಜಕ್ಕೆ ಪರೋಪಕಾರಿಯಾಗಿ ಇರುವುದು ಪ್ರತಿ ಪ್ರಜೆಯ ಜವಾಬ್ದಾರಿ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಡಾ.ಬಿ.ಕೆ.ರವಿ ತಿಳಿಸಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಪಾಲನ್ ಕಾಲೇಜ್ ಆಫ್ ಕಾಮರ್ಸ್, ಬೆಂಗಳೂರು ಉತ್ತರ ವಿವಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
NSS ಶಿಬಿರದ ವಿದ್ಯಾರ್ಥಿಗಳಿಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಬೆಳೆಸುವ ಜೊತೆಗೆ ಗ್ರಾಮೀಣ ಜೀವನ ವ್ಯವಸ್ಥೆ ಅರಿಯಲು ವೇದಿಕೆಯಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಸಿಗುವಂತಹ ವಾತಾವರಣ ನಮ್ಮ ಬೆಂಗಳೂರಿನಲ್ಲಿಯೂ ಸಿಗುವುದಿಲ್ಲ ನಗರಗಳಲ್ಲಿ ವಾಸ ಮಾಡುವ ವಿದ್ಯಾರ್ಥಿಗಳು ಹಳ್ಳಿಯ ಜೀವನ ಹೇಗಿರುತ್ತದೆ ಮತ್ತು ಇಲ್ಲಿನ ಗಾಳಿ, ಜನರ ಭಾಷೆ ಮತ್ತು ಇಲ್ಲಿನ ಸಂಸ್ಕೃತಿ ಇವುಗಳನ್ನ ವಿದ್ಯಾರ್ಥಿಗಳು ಕಲಿಯಬೇಕು ಎಂದರು.
ಈ ಶಿಬಿರಗಳು ಗ್ರಾಮೀಣ ಭಾಗದಲ್ಲಿ ಶ್ರಮದಾನ, ಜಾಗೃತಿ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನವನ್ನು ಅರಿಯಲು ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುತ್ತವೆ ಎಂದರು.
ವಿದ್ಯಾರ್ಥಿಗಳು ಒಂದು ವಾರದಿಂದ ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ್ದಾರೆ, ಶಿಸ್ತು ಕಲಿಸಿದ್ದಾರೆ. ಕಾಲೇಜು ಮಕ್ಕಳಿಂದ ಗ್ರಾಮೀಣ ಭಾಗದ ಜನರು ತಿಳಿದುಕೊಳ್ಳುವುದು ಕೂಡ ಸಾಕಷ್ಟಿದೆ ವಿದ್ಯಾರ್ಥಿಗಳು ಇಲ್ಲಿ ಕೈಗೊಂಡ ಸ್ವಚ್ಛತೆಯ ಪಾಠವನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ಇದೇ ವೇಳೆ ಗೋಪಾಲನ್ ಕಾಲೇಜ್ ಆಫ್ ಕಾಮರ್ಸ್ ಎನ್.ಎಸ್.ಎಸ್. ಶಿಬಿರಾರ್ಥಿಗಳು ತುಮ್ಮನಹಳ್ಳಿ ಸರ್ಕಾರಿ ಶಾಲೆಯನ್ನು ಸ್ವಚ್ಛಗೊಳಿಸಿ, ವಿವಿಧ ಬಣ್ಣ ಬಳಿಯುವ ಮೂಲಕ ಶಾಲೆಗೆ ಮೆರಗು ತಂದಿದ್ದಾರೆ , ಶಿಬಿರಾರ್ಥಿಗಳು, ಹೆಣ್ಣು ಅಬಲೆ ಅಲ್ಲ, ಸಬಲೆ ಆಪತ್ತು ಕಾಲದಲ್ಲಿ ಹೆಣ್ಣು ಹೇಗೆ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಬೇಕೆಂಬ ಕಿರು ನಾಟಕವನ್ನು ಪ್ರದರ್ಶಿಶಿಸಿದರು.
ಈ ಸಂದರ್ಭದಲ್ಲಿ ಪಿಡಿಓ ಕ್ಯಾತಾಯಿನಿ, ಜಿಲ್ಲಾ ಪ್ರಥಮ ದರ್ಜೆ ಕಾಲೇಜಿನ ಪ್ರೊ.ರಂಗಪ್ಪ, ಮುಖ್ಯೋಪಾಧ್ಯಾಯಿನಿ ಉಮಾದೇವಿ, ಶಿಕ್ಷಕ ಮಂಜುನಾಥ್, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶಂಕರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಶ್ವಥ್ ನಾರಾಯಣ, ಮಾಜಿ ಗ್ರಾ.ಪಂ.ಅಧ್ಯಕ್ಷ ಮಂಜುನಾಥ್, ಗ್ರಾಮದ ಮುಖಂಡ ಸುರೇಂದ್ರ ಹಾಗು ಶಿಬಿರಾರ್ಥಿಗಳು ಹಾಜರಿದ್ದರು.











