ವಿಜಯಪುರದಲ್ಲಿ ಜೆಡಿಎಸ್ ಬಹಿರಂಗ ಸಮಾವೇಶ. ಬಿಜೆಪಿ ಸರ್ಕಾರದಿಂದ ಶೂನ್ಯ ಅಭಿವೃದ್ಧಿ : ಸಿಎಂ ಇಬ್ರಾಹಿಂ ವಾಗ್ದಾಳಿ

ವಿಜಯಪುರ, (ದೇವನಹಳ್ಳಿ ತಾಲ್ಲೂಕು.)
ಪಟ್ಟಣದ ಶಿವ ಗಣೇಶ ಸರ್ಕಲ್ ನಲ್ಲಿ ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಪರವಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರು ಬಹಿರಂಗ ಸಭೆಯಲ್ಲಿ ಮತಯಾಚನೆ ಮಾಡಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ಮಾತನಾಡಿದ ಅವರು ರಾಜ್ಯದಲ್ಲಿನ ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರ ಬಗ್ಗೆ ಜೆಡಿಎಸ್ ಪಕ್ಷಕ್ಕೆ ಇರುವ ಕಾಳಜಿ ರಾಷ್ಟ್ರೀಯ ನಾಯಕರಿಗೆ ಇಲ್ಲ. ಜೆಡಿಎಸ್ ಸಂವಿಧಾನದ ಆಶಯಗಳಂತೆ ನಡೆಯುತ್ತಿರುವ ಏಕೈಕ ಪಕ್ಷವಾಗಿದೆ ಸಂವಿಧಾನಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲದಂತೆ ಬಿಜೆಪಿ ನಡೆದುಕೊಳ್ಳುತಿದೆ .ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಿದ್ದಾರೆ. ಈ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಕಾರ್ಯಗತ ಗೊಂಡಿರುವುದು ಜೆಡಿಎಸ್ ನಿಂದಲೇ ಹೊರತು ರಾಷ್ಟ್ರೀಯ ಪಕ್ಷಗಳಿಂದ ಅಲ್ಲ ರಾಜ್ಯದಲ್ಲಿನ ಸಂಪನ್ಮೂಲವನ್ನು ಗಮನದಲ್ಲಿಟ್ಟುಕೊಂಡು ಪಂಚರತ್ನ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದರು.

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆರಿದೆ ಜನಸಾಮಾನ್ಯರು ಹೇಗೆ ಜೀವನ ನಡೆಸುತ್ತಿದ್ದಾರೆ ಎನ್ನುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರಿವಿಲ್ಲ .ಅವರಿಗೆ ಕುಟುಂಬವಿಲ್ಲ ಜನರ ಸಮಸ್ಯೆಗಳನ್ನು ಬಗೆಹರಿಸುವುದರ ಬದಲಿಗೆ ರೋಡ್ ಶೋ ನಡೆಸುವ ಮೂಲಕ ಮತಕ್ಕಾಗಿ ಜನರ ಬಳಿ ಅಂಗಲಾಚುತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಮಾಡಿದ್ದಿದ್ದರೆ ಮೋದಿ ಯಾಕೇ ಬರಬೇಕಾಗಿತ್ತು. ಈಗಲೂ ಬಿಜೆಪಿ ನಾಯಕರಿಗೆ ಜನರ ಬಳಿ ಮತ ಕೇಳಲು ಮುಖವಿಲ್ಲ. ಅವರು ಮೋದಿ ಮುಖ ನೋಡಿ ಮತ ನೀಡಿ ಎನ್ನುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರು ಅಲ್ಪಸಂಖ್ಯಾತರ ಮತಗಳಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ಹಿಜಾಬ್, ಹಲಾಲ್ ಕಟ್, ಎನ್ ಸಿ ಆರ್ ನಂತಹ ಸಮಸ್ಯೆಗಳು ಬಂದಾಗ ಅಲ್ಪಸಂಖ್ಯಾತರ ಪರವಾಗಿ ಧ್ವನಿ ಎತ್ತಲಿಲ್ಲ. ಕೋಲಾರದಲ್ಲಿ ತನಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕೆ ದೇವನಹಳ್ಳಿಯಲ್ಲಿ ಕೆಎಚ್ ಮುನಿಯಪ್ಪ ಅವರಿಗೆ ಸೀಟು ಕೊಟ್ಟಿದ್ದಾರೆ ಹೊರತು ಇಲ್ಲಿ ಕೆಲಸ ಮಾಡಲು ಮುನಿಯಪ್ಪ ಅವರಿಗೆ ಇಷ್ಟವಿಲ್ಲ ಆದ್ದರಿಂದ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ ಬಹುತೇಕರ ಮೇಲೆ ಕ್ರಿಮಿನಲ್ ಕೇಸ್ಗಳಿವೆ ಜೆಡಿಎಸ್ ಪಕ್ಷದ ಒಬ್ಬ ಅಭ್ಯರ್ಥಿಯ ಮೇಲು ಕೇಸ್ಗಳಿಲ್ಲ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಸಿಎಂ ಇಬ್ರಾಹಿಂ ಟೀಕಿಸಿದರು.